newsics.com
ಮೈಸೂರು: ಜಗತ್ಪçಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಶನಿವಾರ ಅದ್ಧೂರಿಯಾಗಿ, ವಿಜೃಂಭಣೆಯಿAದ ವೈಭವಯುತವಾಗಿ ನಡೆದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯನ್ನು ಕಣ್ಮನ ತುಂಬಿಕೊಳ್ಳಲೆಂದು ಜನಸಾಗರವೇ ಅರಮನೆ ನಗರಿ ಮೈಸೂರಿಗೆ ಹರಿದುಬಂದಿತ್ತು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬೆನ್ನ ಮೇಲಿನ ಚಿನ್ನದ ಅಂಬಾರಿಯಲ್ಲಿ ಅಲಂಕಾರಗೊAಡು ಕಂಗೊಳಿಸುತ್ತಾ ಬರುವ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಲೆಂದು ಎಲ್ಲಾ ಕಡೆಯಿಂದ ಆಗಮಿಸಿದ್ದ ಜನರು ಇಂದು ಬೆಳಗ್ಗೆ ಅರಮನೆ ಸೇರಿ ಇಡೀ ನಾಲ್ಕೂವರೆ ಕಿ.ಮೀ ರಾಜಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು.
ಸುರಿಯುವ ಮಳೆ ಕಾಟದ ನಡುವೆ ಊಟ, ತಿಂಡಿ ಪರಿವೆಯಿಲ್ಲದೆ, ಕುಳಿತ ಜಾಗದಿಂದ ಕದಲದೆ ಕುಳಿತಲ್ಲೇ ಕುಳಿತು, ನಿಂತಲ್ಲೇ ನಿಂತು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ಒಂದೊಂದು ಮನಮೋಹಕವಾದ ಜಾನಪದ ಕಲಾತಂಡಗಳು, ಅತ್ಯಾಕರ್ಷಕ ಸ್ತಬ್ಧಚಿತ್ರಗಳನ್ನು ನೋಡಿ, ಕಣ್ಮನ ತುಂಬಿಕೊಂಡು ಸಂಭ್ರಮಿಸಿದರು.
ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಹೊತ್ತು ಕುಮ್ಕಿ ಆನೆಗಳೊಂದಿಗೆ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಸಾಗುತ್ತಿದ್ದಂತೆ ಮೆರವಣಿಗೆಯ ರಾಜಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಲಕ್ಷಾಂತರ ಜನಸ್ತೋಮ ಹರ್ಷೋದ್ಘಾರ ಮಾಡಿ, ಚಾಮುಂಡೇಶ್ವರಿಗೆ ಶ್ರದ್ಧಾ, ಭಕ್ತಿ, ಭಾವದಿಂದ ನಮಿಸಿ ಗೌರವ ಸಲ್ಲಿಸಿದರು. ಚಾಮುಂಡಮ್ಮನಿಗೆ ಜೈ ಅನ್ನುವ ಘೋಷಣೆ ಮೊಳಗಿತು.
ಜಂಬೂಸವಾರಿ ನೋಡಲು ಬೆಳಗ್ಗೆಯಿಂದಲೇ ಜನರು ಮಾರ್ಗದ ಉದ್ದಕ್ಕೂ ಇರುವ ಕಟ್ಟಡಗಳನ್ನು ಏರಿ ಕುಳಿತಿದ್ದರು. ಹೀಗಾಗಿ ಕಟ್ಟಡಗಳು ಕಿಕ್ಕಿರಿದ ಜನರಿಂದ ತುಂಬಿ ತುಳುಕುತ್ತಿದ್ದವು. ಕಟ್ಟಡಗಳು ಶಿಥಲಗೊಂಡಿದ್ದರೂ, ಅದನ್ನು ಲೆಕ್ಕಿಸದ ಜನರು ಅದರ ಮೇಲೇರಿ ಜಂಬೂಸವಾರಿ ನೋಡಿ ಖುಷಿಪಟ್ಟರು. ರಸ್ತೆಯ ಇಕ್ಕಲೆಗಳಲ್ಲಿ ಭಾರೀ ಜನಸ್ತೋಮ ಜಮಾಯಿಸಿದ್ದರಿಂದ ನೂಕು ನುಗ್ಗುಲು ಉಂಟಾಗುತ್ತಲೇ ಇತ್ತು. ಅದರಲ್ಲಿ ಸಿಲುಕಿದ ಯುವತಿಯರು, ಮಕ್ಕಳು, ಮಹಿಳೆಯರು ಹೈರಾಣಾಗಿ ಹೋದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿದ್ದರು.
ಈ ಹಿಂದಿನ ವರ್ಷಗಳಲ್ಲಿ ಜಂಬೂಸವಾರಿ ಮೆರವಣಿಗೆ ನೋಡಲು ಸುಮಾರು 5 ಲಕ್ಷ ಜನರು ದೇಶ, ವಿದೇಶಗಳ ವಿವಿಧೆಡೆಯಿಂದ ಮೈಸೂರಿಗೆ ಬರುತ್ತಿದ್ದರು. ಆದರೆ ಈ ವರ್ಷ ಅದರ ದುಪ್ಪಟ್ಟು ಜನರು ಬಂದಿದ್ದರು. ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಸಂಚಾರ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಜನರು ಸೇರಲು ಹೆಚ್ಚಿನ ಕಾರಣವಾದರೆ, ಸಾಲು, ಸಾಲು ರಜೆ ಬಂದಿರುವುದು ಮತ್ತೊಂದು ಕಾರಣ.
ಜಂಬೂಸವಾರಿ ನೋಡಲೆಂದು ಮೂರು ದಿನಗಳ ಮೊದಲೇ ರಾಜ್ಯ ನಾಲ್ಕು ದಿಕ್ಕಿನಲ್ಲಿರುವ ಜಿಲ್ಲೆಗಳಿಂದ ಮಹಿಳೆಯರು ತಮ್ಮ ಕುಟುಂಬದವರು, ಸ್ನೇಹಿತರು, ನೆಂಟರು, ಪರಿಚಿತರೊಂದಿಗೆ ಮೈಸೂರಿಗೆ ಬಂದು ಬೀಡು ಬಿಟ್ಟಿದ್ದರು.
ಜಂಬೂಸವಾರಿಯನ್ನು ಮೊದಲ ಬಾರಿಗೆ ನೋಡಿದವರಿಗೆ ಏನೋ ಅದ್ಭುತವನ್ನು ನೋಡಿದ ಅನುಭವ ಅವರಲ್ಲಿ ಕಣ್ಣಲ್ಲಿ ಕಾಣುತ್ತಿತ್ತು. ಮನದಲ್ಲಿ ಖುಷಿಯ ಸಂಭ್ರಮ ಮನೆ ಮಾಡಿತ್ತು.
ಸಾವಿರಾರು ವಾಹನಗಳಲ್ಲಿ ಮೈಸೂರಿಗೆ ಪ್ರವಾಸಿಗರು ಬಂದಿದ್ದ ಕಾರಣ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳ ದಟ್ಟಣಿಯನ್ನು ನಿಭಾಯಿಸುವಲ್ಲಿ ಸಂಚಾರಿ ಪೊಲೀಸರು ಹೈರಾಣಾಗಿ ಹೋದರು. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡವರು ಅದರಿಂದ ಹೊರಬರಲು ಗಂಟೆಗಟ್ಟಲೆ ಪರದಾಡಿದರು.
ಮಳೆಯ ನಡುವೆಯೂ ಮೈಸೂರಿನಲ್ಲಿ ಜಂಬೂಸವಾರಿ ವೈಭವ, ನಾಡ ಅಧಿದೇವತೆಯನ್ನು ಕಣ್ತುಂಬಿಕೊಂಡ ಲಕ್ಷ ಲಕ್ಷ ಜನ