newsics.com
ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ ಆರೋಪ ಇರುವ ಕಾರಣ ಇದೀಗ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ದರ್ಶನ್ಗೆ, ಬಳ್ಳಾರಿ ಜೈಲಿನಲ್ಲಿಯೂ ಸಹ ವಿಶೇಷ ಆತಿಥ್ಯ ಸಿಗಲಿದೆಯೇ ಎಂಬ ಅನುಮಾನ ಹಲವರಿಗೆ ಮೂಡಿದೆ. ದರ್ಶನ್ ರ ಬಳ್ಳಾರಿಯ ಬ್ಯಾರಕ್ ಹೇಗಿದೆ? ಬಳ್ಳಾರಿ ಜೈಲಿನಲ್ಲಿ ಅವರಿಗೆ ಏನೇನು ಸಿಗಲಿವೆ? ದರ್ಶನ್ಗೆ ಇಲ್ಲಿ ಏನು ಸಿಗುವುದಿಲ್ಲ ಇನ್ನಿತರೆ ವಿಷಯಗಳ ಬಗ್ಗೆ ಪ್ರಿಸನ್ ನಾರ್ತ್ ಡಿಐಜಿ ಟಿಪಿ ಶೇಷ ಅವರು ಮಾತನಾಡಿದ್ದಾರೆ.
ದರ್ಶನ್ ಅವರನ್ನು ವಿಐಪಿ ಸೆಲ್ನಲ್ಲಿ ಇಡಲಾಗಿದೆ ಎಂಬುದು ಸುಳ್ಳು, ಅವರನ್ನು ಹೆಚ್ಚುವರಿ ಭದ್ರತೆ ಇರುವ ಬ್ಯಾರಕ್ನಲ್ಲಿ ಇಡಲಾಗಿದೆ. ಹೈ ಸೆಕ್ಯೂರಿಟಿ ಬ್ಯಾರಕ್ನ 15ನೇ ಅಂದರೆ ಕೊನೆಯ ಸೆಲ್ನಲ್ಲಿ ದರ್ಶನ್ ಅನ್ನು ಇಡಲಾಗಿದೆ. ಆ ಬ್ಯಾರಕ್ನಲ್ಲಿ ನಾಲ್ಕು ಜನ ಇತರೆ ಕೈದಿಗಳಿದ್ದಾರೆ. ಒಂದೊಂದು ಸೆಲ್ನಲ್ಲಿ ಒಬ್ಬೊಬ್ಬರೇ ಕೈದಿಗಳಿದ್ದಾರೆ. ದರ್ಶನ್ ಕಾವಲಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಆ ಸಿಬ್ಬಂದಿಗೆ ಬಾಡಿ ಕ್ಯಾಮ್ ಅಳವಡಿಸಲಾಗಿದ್ದು, 24 ಗಂಟೆಗಳ ಕಾಲವೂ ದರ್ಶನ್ ಮೇಲೆ ನಿಗಾವಣೆ ಇರಲಿದೆ’ ಎಂದಿದ್ದಾರೆ ಶೇಷ.
ಜೈಲಿನ ಸಿಬ್ಬಂದಿಗೂ ಸಹ ಮೊಬೈಲ್ ನಿಷೇಧ ಮಾಡಲಾಗಿದೆ. 3 ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ. ಸದ್ಯಕ್ಕೆ ಕಾಲ್ ಜಾಮರ್ ಇಲ್ಲ, ಆದರೆ ಹೊಸ ಮಾದರಿಯ ಕಾಲ್ ಜಾಮರ್ ಅನ್ನು ಅಳವಡಿಸಲು ಸಿದ್ದತೆ ನಡೆಸಲಾಗಿದೆ. ಕೈದಿಯ ಇತರೆ ಕೈದಿಗಳಿಗೆ ಯಾವ ನಿಯಮ ಅನ್ವಯ ಆಗುತ್ತದೆಯೋ ಅದೇ ಕಾನೂನು ದರ್ಶನ್ಗೂ ಸಹ ಅನ್ವಯ ಆಗುತ್ತದೆ. ನಮ್ಮ ಮೇಲೆ ಸಹ ಯಾವುದೇ ರಾಜಕಾರಣಿಗಳ ಒತ್ತಡ ಅಥವಾ ಹಿರಿಯ ಅಧಿಕಾರಿಗಳ ಒತ್ತಡ ಇಲ್ಲ. ನಾವು ನಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಲಿದ್ದೇವೆ’ ಎಂದಿದ್ದಾರೆ.