newsics.com| ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದಶಕಗಳಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ದರ್ಬಾರ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಬ್ರೇಕ್ ಹಾಕಿದ್ದಾರೆ.
ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಪುನರ್ ವ್ಯವಸ್ಥೆಗೆ ಕೈಹಾಕಿರುವ ಸಿಎಂ, ಒಂದೇ ಸೂಕ್ಷ್ಮ ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ಸುಮಾರು ಶೇ.80ರಷ್ಟು ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ಇಲಾಖೆಗೆ ‘ಮೇಜರ್ ಸರ್ಜರಿ’ ಮಾಡಿದ್ದಾರೆ.
ಅನಧಿಕೃತ ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವುದು, ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒಡನಾಟಕ್ಕೆ ಬ್ರೇಕ್ ಹಾಕುವುದು ಮತ್ತು ಇಲಾಖೆಯ ಆದಾಯವನ್ನು ಹೆಚ್ಚಿಸುವ ಜವಾಬ್ದಾರಿಯೊಂದಿಗೆ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.
160 ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಆದೇಶದನ್ವಯ ಇಲಾಖೆಯ ವಿವಿಧ ವೃಂದದ ಒಟ್ಟು 160 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ.
ದಶಕಗಳ ಕಾಲ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ತಮ್ಮ ಸ್ವಂತ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲೇ ರಾಜಕೀಯ ಪ್ರಭಾವ ಬಳಸಿ ಹುದ್ದೆ ಗಿಟ್ಟಿಸಿಕೊಂಡಿದ್ದ ಅಧಿಕಾರಿಗಳನ್ನು ಈ ಬಾರಿ ಕಡ್ಡಾಯವಾಗಿ ದೂರದ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ.
ರೋಹಿಣಿ ಸಿಂಧೂರಿ ಪ್ರಸ್ತಾಪಿಸಿದ್ದ ಕಡತಕ್ಕೆ ಸಿಎಂ ಅಸ್ತು!
ಜುಲೈ 1 ರಂದು ನಡೆದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸುದೀರ್ಘ ಕಾಲದ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಇಲಾಖೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಳಮಟ್ಟದಿಂದ ಬದಲಾವಣೆ ಅಗತ್ಯ ಎಂದು ಅವರು ವಿವರಿಸಿದ್ದರು.
ವಿಷಯದ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಪ್ರಭಾವ ಹಾಗೂ ಅಧಿಕಾರಿಗಳ ಶಾಮೀಲಾಗಿರುವಿಕೆಯನ್ನು ಮುರಿಯಲು ತಕ್ಷಣವೇ ವರ್ಗಾವಣೆಯ ಸಮಗ್ರ ಕಡತ ಮಂಡಿಸುವಂತೆ ಸಭೆಯಲ್ಲೇ ರೋಹಿಣಿ ಸಿಂಧೂರಿ ಅವರಿಗೆ ಖಡಕ್ ಸೂಚನೆ ನೀಡಿದ್ದರು.
ಸಿಎಂ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಬೃಹತ್ ಆಡಳಿತಾತ್ಮಕ ಮರುಹಂಚಿಕೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.
ಒಂದೇ ಸ್ಥಳದಲ್ಲಿದ್ದ ಅಧಿಕಾರಿಗಳು ಸ್ಥಳೀಯ ಅಕ್ರಮ ಗಣಿಗಾರಿಕೆ ದಂಧೆಕೋರರೊಂದಿಗೆ ಶಾಮೀಲಾಗುವುದನ್ನು ತಡೆಯುವುದು. ರಾಜಕೀಯ ಮತ್ತು ಪ್ರಾದೇಶಿಕ ಒತ್ತಡಗಳಿಗೆ ಮಣಿಯದೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ವಾತಾವರಣ ನಿರ್ಮಿಸುವುದು. ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನಡೆದಿರುವುದು ಇದೇ ಮೊದಲು.
ಇದರ ನೇರ ಉದ್ದೇಶ ಸರ್ಕಾರದ ಖಜಾನೆಗೆ ಬರುವ ಗಣಿಗಾರಿಕೆ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದಾಗಿದೆ. ಸೂಕ್ಷ್ಮ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ತರುವುದು ಮುಖ್ಯ ಉದ್ದೇಶವಾಗಿದೆ.
ಮುಖ್ಯಮಂತ್ರಿಗಳ ಈ ದಿಟ್ಟ ಕ್ರಮದಿಂದಾಗಿ ಗಣಿ ದಂಧೆಕೋರರಿಗೆ ಹಾಗೂ ಅವರಿಗೆ ಸಾಥ್ ನೀಡುತ್ತಿದ್ದ ಅಧಿಕಾರಿ ವಲಯಕ್ಕೆ ತೀವ್ರ ನಡುಕ ಉಂಟಾಗಿದ್ದು, ಇಲಾಖೆಯಲ್ಲಿ ಹೊಸ ಆಡಳಿತ ಪರ್ವ ಆರಂಭವಾದಂತಾಗಿದೆ.
Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ
DGP found dead ಕಚೇರಿಯಲ್ಲೇ ಡಿಜಿಪಿ ನಿಗೂಢ ಸಾವು: ಇಲಾಖೆಯಲ್ಲಿ ತಲ್ಲಣ!
Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು