newsics.com | ನ್ಯೂಸಿಕ್ಸ್
ರಾಂಚಿ: ದೇಶದಲ್ಲಿ ಕಾನೂನು ವ್ಯವಸ್ಥೆ ಎಷ್ಟೇ ಬಲಿಷ್ಠವಾಗಿದ್ದರೂ, ಕೆಲವು ಹಳ್ಳಿಗಳಲ್ಲಿ ಇಂದಿಗೂ ಪಂಚಾಯತ್ ಕಟ್ಟೆಗಳೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದಕ್ಕೆ ಜಾರ್ಖಂಡ್ನಿಂದ ಒಂದು ಅತ್ಯಂತ ಆಘಾತಕಾರಿ ಉದಾಹರಣೆ ಬೆಳಕಿಗೆ ಬಂದಿದೆ. 3 ವರ್ಷದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಪೊಲೀಸರಿಗೆ ತಿಳಿಸದೆ, ಊರಲ್ಲೇ ಮುಚ್ಚಿಹಾಕಲು ಯತ್ನಿಸಿದ ಗ್ರಾಮ ಪಂಚಾಯತ್, ಆರೋಪಿಗೆ ದಂಡ ವಿಧಿಸಿ ಆ ಹಣದಲ್ಲಿ ಮದ್ಯದ ಪಾರ್ಟಿ ಮಾಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ನಡೆದಿದ್ದೇನು? ಪರಿಚಯಸ್ಥನಿಂದಲೇ ವಿಕೃತಿ!
ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಆರೋಪಿ ಸುನಿಲ್ ಲೋಹಾರ ಎಂಬಾತ ತನ್ನದೇ ಗ್ರಾಮದ ಪರಿಚಯಸ್ಥರ ಮನೆಗೆ ಹೋಗಿದ್ದನು. ಆ ವೇಳೆ ಮನೆಯಲ್ಲಿದ್ದ 3 ವರ್ಷದ ಹೆಣ್ಣುಮಗುವನ್ನು ತಾನು ನೋಡಿಕೊಳ್ಳುವುದಾಗಿ ತಾಯಿಯನ್ನು ನಂಬಿಸಿದ್ದಾನೆ. ತಾಯಿ ಮನೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ, ಮಗುವನ್ನು ಪಕ್ಕದ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಗುವಿನ ಚೀರಾಟ ಕೇಳಿ ತಾಯಿ ಓಡಿ ಬಂದಾಗ ವಿಕೃತಿ ಬಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ದೂರಿನ ಬದಲು ರೂ. 1 ಲಕ್ಷ ದಂಡ
ಈ ಗಂಭೀರ ಅಪರಾಧದ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದಲು, ಗ್ರಾಮದ ಪಂಚಾಯತ್ ಸದಸ್ಯರು ಭಾನುವಾರ ತುರ್ತು ಸಭೆ ಕರೆದಿದ್ದಾರೆ. ಕಾನೂನು ಕ್ರಮದಿಂದ ಆರೋಪಿಯನ್ನು ಪಾರು ಮಾಡಲು ಆತನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಕರಣ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಜೈಲು ಶಿಕ್ಷೆಯಿಂದ ಪಾರಾಗುವ ಸಮಾಧಾನದಲ್ಲಿದ್ದ ಆರೋಪಿ ಸುನಿಲ್, ತಕ್ಷಣವೇ 20,000 ರೂಪಾಯಿ ಮುಂಗಡ ಹಣವನ್ನು ಪಂಚಾಯತ್ಗೆ ಪಾವತಿಸಿದ್ದಾನೆ. ಬಾಕಿ 80,000 ರೂಪಾಯಿಗಳನ್ನು ನೀಡಲು ಒಂದು ವಾರ ಗಡುವು ಪಡೆದಿದ್ದಾನೆ.
ಸಂತ್ರಸ್ತ ಕುಟುಂಬಕ್ಕೆ ವಂಚನೆ, ಸದಸ್ಯರಿಂದ ಎಣ್ಣೆ ಪಾರ್ಟಿ
ಅತ್ಯಂತ ಕ್ರೂರ ಸಂಗತಿಯೆಂದರೆ, ಪಂಚಾಯತ್ ಸದಸ್ಯರು ಆರೋಪಿಯಿಂದ ಪಡೆದ 20,000 ರೂಪಾಯಿಗಳನ್ನು ನೊಂದ ಮಗುವಿನ ಕುಟುಂಬಕ್ಕೆ ನೀಡದೆ, ತಾವೇ ರಾತ್ರಿ ಮಾಂಸ ಮತ್ತು ಮದ್ಯದ ಭರ್ಜರಿ ಪಾರ್ಟಿ ಆಯೋಜಿಸಿ ಮಜಾ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತ ಕುಟುಂಬದ ಮೇಲೆ ಒತ್ತಡ ಹೇರಿದ್ದಾರೆ.
ಈ ಅಕ್ರಮ ಪಂಚಾಯತ್ ಮತ್ತು ಅತ್ಯಾಚಾರ ಮುಚ್ಚಿಹಾಕುವ ಯತ್ನದ ಕುರಿತು ಸಾರ್ವಜನಿಕರೊಬ್ಬರು ಘಾಘ್ರಾ ಪೊಲೀಸ್ ಠಾಣೆಗೆ ರಹಸ್ಯ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಹಳ್ಳಿಯಲ್ಲಿ ಮದ್ಯದ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಆರೋಪಿ ಸುನಿಲ್ ಲೋಹಾರನನ್ನು ಬಂಧಿಸಿದ್ದಾರೆ. ಬಳಿಕ ಮಗುವಿನ ತಾಯಿಯ ಹೇಳಿಕೆ ಪಡೆದು ಅಧಿಕೃತ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಂಗಿ ಪಂಚಾಯತ್ ಮುಖ್ಯಸ್ಥ ಲೋಡೋ ಎಕ್ಕಾ, “ಪಾಲ್ಮಾ ಗ್ರಾಮದಲ್ಲಿ ಸಭೆ ನಡೆದಿರುವುದು ನಿಜ. ಆದರೆ ಅದರ ಸಂಪೂರ್ಣ ಮಾಹಿತಿ ನನಗಿರಲಿಲ್ಲ. ಪೊಲೀಸರು ದಾಳಿ ನಡೆಸಿದ ಮೇಲೆಯೇ ನನಗೆ ವಿಷಯ ತಿಳಿಯಿತು” ಎಂದು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾರಿಕೊಂಡಿದ್ದಾರೆ.