newsics.com | ನ್ಯೂಸಿಕ್ಸ್
ರಾಮನಗರ: ಚನ್ನಪಟ್ಟಣದ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಮೇಲೆ ಸರ್ಕಾರಿ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ, ದರೋಡೆ ಹಾಗೂ ಕೊಲೆ ಯತ್ನ ನಡೆದಿರುವ ಭೀಕರ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ (Facebook) ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ತನ್ನ ಗ್ಯಾಂಗ್ನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೇಸ್ಬುಕ್ ಸ್ನೇಹವೇ ಮುಳುವಾಯ್ತು
ದೂರಿನ ವಿವರಗಳ ಪ್ರಕಾರ, ಮೈಸೂರು ಮೂಲದ ಅನುಶ್ ಎಂಬ ಯುವಕನಿಗೆ ತಹಶೀಲ್ದಾರ್ ಗಿರೀಶ್ ಅವರ ಪರಿಚಯ ಫೇಸ್ಬುಕ್ನಲ್ಲಿ ಆಗಿತ್ತು. ದಿನಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಇದೇ ಸ್ನೇಹದ ದುರುಪಯೋಗ ಪಡಿಸಿಕೊಂಡ ಅನುಶ್, ಕಳೆದ ಜೂನ್ 28ರಂದು ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಕ್ವಾರ್ಟರ್ಸ್ಗೆ ಬಂದಿದ್ದನು.
ಜೂಸ್ನಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಬೆರೆಸಿ ವಿಕೃತಿ
ಅಂದು ರಾತ್ರಿ ತಹಶೀಲ್ದಾರ್ ನಿವಾಸದಲ್ಲಿ ಮದ್ಯಪಾನ ಮಾಡಿದ್ದ ಆರೋಪಿಗಳು, ನಂತರ ಗಿರೀಶ್ ಅವರಿಗೆ ಕುಡಿಯಲು ಜೂಸ್ ನೀಡಿದ್ದರು. ಆ ಜೂಸ್ನಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಅಥವಾ ಮಂಕುಬೂದಿ ಬೆರೆಸಲಾಗಿತ್ತು ಎನ್ನಲಾಗಿದೆ. ಜೂಸ್ ಕುಡಿದ ತಹಶೀಲ್ದಾರ್ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆರೋಪಿಗಳು ತಮ್ಮ ಅಸಲಿ ಕ್ರೌರ್ಯ ಮೆರೆದಿದ್ದಾರೆ. ಗಿರೀಶ್ ಅವರ ಬಟ್ಟೆಗಳನ್ನು ಬಿಚ್ಚಿ ವಿಕೃತವಾಗಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿನ್ನಾಭರಣ ಲೂಟಿ; 10 ಲಕ್ಷ ರೂಪಾಯಿಗೆ ಬೇಡಿಕೆ
ಲೈಂಗಿಕ ಕಿರುಕುಳ ನೀಡಿದ್ದಷ್ಟೇ ಅಲ್ಲದೆ, ಗಿರೀಶ್ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಕಿಡಿಗೇಡಿಗಳು ದರೋಡೆ ಮಾಡಿದ್ದಾರೆ. ತದನಂತರ ತಹಶೀಲ್ದಾರ್ ಅವರ ಬಳಿ 10 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದಾರೆ. ಇದಕ್ಕೆ ಗಿರೀಶ್ ಒಪ್ಪದಿದ್ದಾಗ ಅವರನ್ನು ಕೊಲೆ ಮಾಡಲು ಸಹ ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 29ರ ವರೆಗೆ ನಡೆದ ಈ ಸರಣಿ ಕೃತ್ಯದಿಂದ ತಹಶೀಲ್ದಾರ್ ಅವರು ಮಾನಸಿಕ ಹಾಗೂ ದೈಹಿಕವಾಗಿ ಸಂಪೂರ್ಣ ಜರ್ಜರಿತರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ನೀಡಿದ ಗಂಭೀರ ದೂರಿನ ಮೇರೆಗೆ ಚನ್ನಪಟ್ಟಣ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣದ ಮೊದಲ ಆರೋಪಿ (A1) ಅನುಶ್ನನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿ ಸದ್ಯ ತಲೆಮರೆಸಿಕೊಂಡಿರುವ ಶೋಭರಾಜನ್ ಮತ್ತು ನವೀನ್ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.
ಜಿಲ್ಲೆಯ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯೊಬ್ಬರ ಅಧಿಕೃತ ನಿವಾಸದಲ್ಲೇ ಇಂತಹದೊಂದು ಹನಿಟ್ರ್ಯಾಪ್ ಮಾದರಿಯ ವಿಕೃತ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
Rain Alert ಮಲೆನಾಡಿನಲ್ಲಿ ವರುಣನ ಆರ್ಭಟ: ಕರಾವಳಿಗೆ ‘ರೆಡ್ ಅಲರ್ಟ್’ ಘೋಷಣೆ