newsics.com | ನ್ಯೂಸಿಕ್ಸ್
ಕಾರಿನೊಳಗೆ ಇಡಲಾಗಿದ್ದ ಎಳನೀರು ಚಾಲಕನ ಸೀಟಿನ ಕೆಳಗೆ ಜಾರಿ ಬ್ರೇಕ್ ಹಾಗೂ ಕ್ಲಚ್ ಪೆಡಲ್ಗಳ ನಡುವೆ ಸಿಲುಕಿಕೊಂಡ ಪರಿಣಾಮ ಕಾರು ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ್ದು, ಖ್ಯಾತ ಅರ್ಚಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ಜಕ್ಕಂಪುಡಿ ಸಮೀಪದ ವಿಜಯವಾಡ ಬೈಪಾಸ್ನಲ್ಲಿ ನಡೆದಿದೆ.
ಮೃತರನ್ನ ರಾಜಮಹೇಂದ್ರವರಂ ಮೂಲದ ಖ್ಯಾತ ಅರ್ಚಕ ದುವ್ವುರಿ ಹರಿಪ್ರಸಾದ್ (52) ಹಾಗೂ ದ್ವಿಚಕ್ರ ವಾಹನ ಸವಾರ ಎಂದು ಗುರುತಿಸಲಾಗಿದೆ. ಹರಿಪ್ರಸಾದ್ ಅವರ ಕಿರಿಯ ಮಗನ ಮದುವೆ ಗುರುವಾರ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆ ಸಮಾರಂಭದ ಬಳಿಕ ಶುಕ್ರವಾರ ಮಧ್ಯಾಹ್ನ ಕುಟುಂಬ ಸದಸ್ಯರೆಲ್ಲರೂ ರಾಜಮಹೇಂದ್ರವರಂಗೆ ಮರಳುತ್ತಿದ್ದರು.
ಕುಟುಂಬದವರು ಒಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಹರಿಪ್ರಸಾದ್ ಅವರು ಪೂಜಾ ಸಾಮಗ್ರಿಗಳೊಂದಿಗೆ ಮತ್ತೊಂದು ಕಾರಿನಲ್ಲಿ ಸಂಬಂಧಿಕರೊಬ್ಬರ ಜೊತೆ ಹೊರಟಿದ್ದರು. ವಿಜಯವಾಡ ಸಮೀಪದ ನಲ್ಲಗುಂಟದಲ್ಲಿ ಸಂಬಂಧಿಕರು ಕಾರಿನಿಂದ ಇಳಿದ ನಂತರ ಹರಿಪ್ರಸಾದ್ ಅವರು ಒಬ್ಬರೇ ವಾಹನ ಚಲಾಯಿಸುತ್ತಿದ್ದರು.
ಗೊಲ್ಲಪುಡಿ ಬೈಪಾಸ್ ರಸ್ತೆಗೆ ತಲುಪುತ್ತಿದ್ದಂತೆ ಕಾರು ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ಮೊದಲು ರಸ್ತೆ ಮೇಲೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು, ನಂತರ ವೇಗವಾಗಿ ಮುನ್ನುಗ್ಗಿ ಕಂಟೇನರ್ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರಿಪ್ರಸಾದ್ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಪ್ರಾಥಮಿಕ ಹಂತದಲ್ಲೇ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ಇಡಲಾಗಿದ್ದ ಎಳನೀರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಾಗ ಮುಂಭಾಗಕ್ಕೆ ಜಾರಿ ಚಾಲಕನ ಕಾಲಿನ ಬಳಿ ಬಂದು ಬ್ರೇಕ್ ಹಾಗೂ ಕ್ಲಚ್ ಪೆಡಲ್ಗಳ ನಡುವೆ ಸಿಲುಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರಿಂದ ಬ್ರೇಕ್ ಹಾಕಲು ಸಾಧ್ಯವಾಗದೇ ಕಾರು ನಿಯಂತ್ರಣ ತಪ್ಪಿ ಕಂಟೇನರ್ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ