newsics.com | ನ್ಯೂಸಿಕ್ಸ್
ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನಡೆದಿದ್ದ ಮೂವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಮಾಂಚನಕಾರಿ ಸಂಗತಿಗಳು ಹೊರಬಿದ್ದಿವೆ. ಆರಂಭದಲ್ಲಿ ಶ್ವೇತಾ ತಾನೇ ಈ ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಳಾದರೂ, ಪೊಲೀಸರ ತೀವ್ರ ವಿಚಾರಣೆಯ ಬೆನ್ನಲ್ಲೇ ಅಸಲಿ ಹಂತಕ ಆಕೆಯ ಪ್ರಿಯಕರ ಕೆನತ್ ಎಂಬ ಸತ್ಯ ಬಯಲಾಗಿದೆ.
ಹೆಚ್ಎಎಲ್ ಫ್ಲಾಟ್ನಲ್ಲಿ ಸುಟ್ಟು ಹಾಕಲು ತಂದಿಟ್ಟಿದ್ದ ದೊಡ್ಡ ಡ್ರಮ್!
ಪೊಲೀಸ್ ತನಿಖೆಯ ಪ್ರಕಾರ, ಆರೋಪಿಗಳು ಮೂವರನ್ನು ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹಗಳನ್ನು ಸುಟ್ಟು ಹಾಕಲು ಭಯಾನಕ ಸ್ಕೆಚ್ ಹಾಕಿದ್ದರು. ಕೆ.ಆರ್. ಪುರಂ ಅಪಾರ್ಟ್ಮೆಂಟ್ನಲ್ಲಿ ಕೊಲೆ ನಡೆಸಿ, ಬಳಿಕ ಹೆಚ್ಎಎಲ್ ಬಳಿ ಇರುವ ಮತ್ತೊಂದು ಪ್ಲಾಟ್ಗೆ ಶವಗಳನ್ನು ಸಾಗಿಸಲು ತೀರ್ಮಾನಿಸಿದ್ದರು. ಇದಕ್ಕಾಗಿಯೇ ಕೆನತ್ ಮೊದಲೇ ದೊಡ್ಡದಾದ ಕಬ್ಬಿಣದ ಡ್ರಮ್ ಒಂದನ್ನು ತಂದು ಅಲ್ಲಿ ಇರಿಸಿದ್ದನು. ಶವಗಳನ್ನು ಆ ಡ್ರಮ್ನೊಳಗೆ ಹಾಕಿ, ಬಾತ್ರೂಮ್ನ ಒಳಗೆ ಯಾರಿಗೂ ತಿಳಿಯದಂತೆ ಸುಟ್ಟು ಭಸ್ಮ ಮಾಡಲು ಈ ಭೀಕರ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಅಪಾರ್ಟ್ಮೆಂಟ್ ಬಳಿಯೇ ಸಿದ್ಧವಾಗಿ ನಿಂತಿತ್ತು ಕಾರು
ಕೊಲೆಯಾದ ತಕ್ಷಣ ಮೃತದೇಹಗಳನ್ನು ಪ್ಯಾಕ್ ಮಾಡಿ ಸಾಗಿಸಲು ಆರೋಪಿ ಕೆನತ್ ಅಪಾರ್ಟ್ಮೆಂಟ್ ಮುಂಭಾಗದಲ್ಲೇ ಕಾರೊಂದನ್ನು ತಂದು ಸಿದ್ಧವಾಗಿ ನಿಲ್ಲಿಸಿಕೊಂಡಿದ್ದನು. ತಂದೆ ಸೋಮಸುಂದರ್, ತಾಯಿ ಹಾಗೂ ತಂಗಿಯನ್ನು ಕೆನತ್ ಚಾಕುವಿನಿಂದ ಇರಿದು ಸಾಯಿಸುತ್ತಿದ್ದಾಗ, ತಾನು ತಡೆಯಲು ಪ್ರಯತ್ನಿಸಿದೆ ಆದರೆ ಭಯದಿಂದ ಕಿರುಚಾಡುತ್ತಾ ಕೋಣೆಯೊಳಗೆ ಬಚ್ಚಿಟ್ಟುಕೊಂಡಿದ್ದೆ ಎಂದು ಶ್ವೇತಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾಳೆ. ಕಟುಕ ಕೆನತ್ ಕೂಡ ತಾನೇ ಈ ಮೂರು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ಲಾನ್ ಉಲ್ಟಾ ಆಗಿ ಭಯದಿಂದ ಓಡಿಹೋದ ಪಾಪಿಗಳು
ಆದರೆ, ಆರೋಪಿಗಳು ಅಂದುಕೊಂಡಿದ್ದ ಪ್ಲಾನ್ ಕೊನೆ ಕ್ಷಣದಲ್ಲಿ ಉಲ್ಟಾ ಆಗಿತ್ತು. ಕೆನತ್ ಇರಿಯುತ್ತಿದ್ದಂತೆಯೇ ತೀವ್ರ ರಕ್ತಸಿಕ್ತ ಸ್ಥಿತಿಯಲ್ಲೇ ತಂದೆ ಸೋಮಸುಂದರ್ ಅವರು ಸಹಾಯಕ್ಕಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದನ್ನು ಕಂಡು ತೀವ್ರವಾಗಿ ಹೆದರಿದ ಶ್ವೇತಾ ಮತ್ತು ಕೆನತ್, ಶವಗಳನ್ನು ಕಾರಿಗೆ ಸಾಗಿಸಲು ಸಾಧ್ಯವಾಗದೆ ಅಲ್ಲಿಂದ ತಕ್ಷಣವೇ ಕಾಲ್ಕಿತ್ತಿದ್ದರು.
ಕಾರು, ಬೈಕ್ ಹಾಗೂ ಡೆಡ್ಲಿ ವಶಕ್ಕೆ
ಕೊಲೆಗೆ ಬಳಸಿದ ಚಾಕು, ರಕ್ತಸಿಕ್ತ ಬಟ್ಟೆಗಳು, ಆರೋಪಿಗಳು ಬಳಸಿದ್ದ ಕಾರು, ಬೈಕ್ ಮತ್ತು ಹೆಚ್ಎಎಲ್ ಪ್ಲಾಟ್ನಲ್ಲಿ ಶವ ಸುಡಲು ಇಟ್ಟಿದ್ದ ಆ ಭಯಾನಕ ಡ್ರಮ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಒಮ್ಮೆ ನಾವು ಪ್ರೇಮಿಗಳು ಎಂದರೆ, ಮತ್ತೊಮ್ಮೆ ಕೇವಲ ಸ್ನೇಹಿತರು ಎಂದು ಗೊಂದಲದ ಹೇಳಿಕೆ ನೀಡುತ್ತಿರುವುದರಿಂದ, ಪೊಲೀಸರು ಇಬ್ಬರನ್ನೂ ಕಸ್ಟಡಿಗೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Bus Tragedy ಚಲಿಸುವ ಬಸ್ನಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ ವಿದ್ಯಾರ್ಥಿ: ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕಟ್!