newsics.com | ನ್ಯೂಸಿಕ್ಸ್
ನಲ್ಗೊಂಡ (ತೆಲಂಗಾಣ): ಹಣಕಾಸಿನ ಹಪಾಹಪಿ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇಂಟರ್ನೆಟ್ ನೋಡಿ ಕೊಲೆ ಮಾಡುವ ತಂತ್ರ ಕಲಿತ ವ್ಯಕ್ತಿಯೊಬ್ಬ, ಒಂದೇ ಕುಟುಂಬದ ನಾಲ್ವರನ್ನು ಅತಿ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
₹2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮತ್ತು ಸಾಲದ ವಿವಾದವೇ ಈ ಮಹಾ ಘಾತುಕತನಕ್ಕೆ ಕಾರಣವಾಗಿದೆ.
ಜೂನ್ 22ರಂದು ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೊಹಮ್ಮದ್ ಸುಲ್ತಾನ್, ಅವರ ಪತ್ನಿ ಹಸೀನಾ, ಮಗ ಮುಜಮ್ಮಿಲ್ ಮತ್ತು ಮಗಳು ಅಫ್ಸರಾ ಅವರ ಕೊಳೆತ ಶವಗಳು ಪತ್ತೆಯಾಗಿದ್ದವು.
ಹತ್ಯೆಗೆ ಕಾರಣವೇನು?
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಪವಾರ್ ನೀಡಿರುವ ಮಾಹಿತಿ ಪ್ರಕಾರ, ಹೈದರಾಬಾದ್ನಲ್ಲಿ ಕಾರು ಚಾಲಕನಾಗಿದ್ದ ಮುಖ್ಯ ಆರೋಪಿ ಸಯ್ಯದ್ ಅಸ್ಲಂ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ. ಈ ಹಿಂದೆ ಆತ ಮೃತ ಹಸೀನಾ ಅವರಿಂದ ₹1 ಲಕ್ಷ ಸಾಲ ಪಡೆದಿದ್ದ. ಮತ್ತೊಮ್ಮೆ ಹೆಚ್ಚುವರಿ ಸಾಲ ಕೇಳಲು ಹೋದಾಗ, ಹಸೀನಾ ಅವರು ಹಳೆಯ ಸಾಲಕ್ಕೆ ಬಡ್ಡಿ ಕಟ್ಟದ ಕಾರಣಕ್ಕೆ ಆತನನ್ನು ತರಾಟೆಗೆ ತೆಗೆದುಕೊಂಡು ಹಣ ನೀಡಲು ನಿರಾಕರಿಸಿದ್ದರು. ಇದಕ್ಕೂ ಮುನ್ನ ಹಸೀನಾ ಅವರ ಜಮೀನಿನ ದಾಖಲೆಗಳನ್ನು ಕದಿಯಲು ಅಸ್ಲಂ ನಡೆಸಿದ್ದ ಪ್ರಯತ್ನವೂ ವಿಫಲವಾಗಿತ್ತು. ಈ ಎಲ್ಲ ಕಾರಣಗಳಿಂದ ಉಂಟಾದ ದ್ವೇಷ ಮತ್ತು ಹಣದ ಆಸೆಯೇ ಕೊಲೆಗೆ ಪ್ರಚೋದನೆ ನೀಡಿದೆ.
ವಿಡಿಯೋ ನೋಡಿ ಸ್ಕೆಚ್ ಹಾಕಿದ್ದ ಆರೋಪಿ!
ಪೊಲೀಸ್ ತನಿಖೆಯಿಂದ ಲಭ್ಯವಾಗಿರುವ ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿ ಅಸ್ಲಂ ಹತ್ಯೆ ಮಾಡಲು ಮತ್ತು ಪೊಲೀಸರ ಕೈಗೆ ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳಲು ಆನ್ಲೈನ್ನಲ್ಲಿ ‘How to Kill’ (ಕೊಲೆ ಮಾಡುವುದು ಹೇಗೆ) ಎಂಬ ವಿಡಿಯೋಗಳನ್ನು ನೋಡಿ ಯೋಜನೆ ರೂಪಿಸಿದ್ದ.
ಜೂನ್ 19ರ ಮುಂಜಾನೆ ಹಸೀನಾ ಅವರ ಮನೆಗೆ ನುಗ್ಗಿದ ಆತ, ಮೊದಲು ಹಸೀನಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಆಕೆಯ ಪತಿ ಮತ್ತು ಇಬ್ಬರು ಮಕ್ಕಳನ್ನೂ ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯು ಹತ್ಯೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದು, ಸುಲ್ತಾನ್ ದೇಹದ ಮೇಲೆ 6, ಹಸೀನಾ ದೇಹದ ಮೇಲೆ 7, ಮಗಳು ಅಫ್ಸರಾ ದೇಹದ ಮೇಲೆ 9 ಹಾಗೂ ತೀವ್ರ ಪ್ರತಿರೋಧ ಒಡ್ಡಿದ ಮಗ ಮುಜಮ್ಮಿಲ್ ದೇಹದ ಮೇಲೆ ಬರೋಬ್ಬರಿ 16 ಚಾಕು ಇರಿತದ ಗಾಯಗಳಾಗಿವೆ. ಪ್ರಾಣಭಯದಿಂದ ಹಾಸಿಗೆಯ ಕೆಳಗೆ ಅಡಗಿದ್ದ ಅಫ್ಸರಾಳನ್ನು ಎಳೆದು ತಂದು ಕೊಲ್ಲಲಾಗಿದೆ.
ಕೊಲೆ ಬಳಿಕ ದರೋಡೆ
ನಾಲ್ವರನ್ನು ಹತ್ಯೆ ಮಾಡಿದ ನಂತರ ಆರೋಪಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳನ್ನು ದೋಚಿದ್ದ. ಕದ್ದ ಚಿನ್ನವನ್ನು ಅಡಮಾನವಿಟ್ಟು ₹5.30 ಲಕ್ಷ ಹಣವನ್ನೂ ಪಡೆದಿದ್ದರು. ಸದ್ಯ ಪೊಲೀಸರು ಆರೋಪಿಗಳಿಂದ ₹3 ಲಕ್ಷ ನಗದು, ಚಿನ್ನಾಭರಣ, ಕೊಲೆಗೆ ಬಳಸಿದ ಚಾಕುಗಳು, ರಕ್ತಸಿಕ್ತ ಬಟ್ಟೆಗಳು, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ಕೇ ದಿನದಲ್ಲಿ ಕೇಸ್ ಕ್ಲೋಸ್
ಈ ಭೀಕರ ಪ್ರಕರಣವನ್ನು ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಭೇದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಸುಮಾರು 20 ಜನರನ್ನು ವಿಚಾರಣೆ ನಡೆಸಿದ ಪೊಲೀಸರು, ಘಟನೆ ಬೆಳಕಿಗೆ ಬಂದ ನಾಲ್ಕೇ ದಿನಗಳಲ್ಲಿ ಪ್ರಮುಖ ಆರೋಪಿ ಸಯ್ಯದ್ ಅಸ್ಲಂ, ಆತನ ಪತ್ನಿ ತಬಸ್ಸುಮ್, ಮೊಹಮ್ಮದ್ ಸೋಹೈಲ್ ಮತ್ತು ಹೇಮಂತ್ ಕುಮಾರ್ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿ ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
Adventure trip SSLC ಬಾಲಕಿ ಜತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿ ಮಾಡಿದ್ದೇನು?