https://newsics.com/ನ್ಯೂಸಿಕ್ಸ್
ದೇಶದಲ್ಲಿ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಪರ್ವವೇ ಶುರುವಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಥಳಪತಿ ವಿಜಯ್ TVK ಪಕ್ಷವನ್ನು ಕಟ್ಟಿ ರಾಜ್ಯ ಚುನಾವನೆಯಲ್ಲಿ ಗೆದ್ದು ಸಿಎಂ ಗದ್ದುಗೆ ಏರಿದ್ದಾರೆ. ಇದಾದ ಬಳಿಕ ಕರ್ನಾಟಕದಲ್ಲಿ ಸಹ ಯುವ ನಾಯಕ ಬೇಕೆಂಬ ಕೂಗು ಯುವ ಜನತೆಯಲ್ಲಿ ಕೇಳಿಬಂದಿತ್ತು.
ಆದರೆ ಇದೀಗ ಈ ವಿಚಾರವಾಗಿ ನಟ, ಚೇತನ್ ಅಹಿಂಸ (Chetan Ahimsa) ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದಾರೆ.
ಚೇತನ್ ಅಹಿಂಸಾ ಹೊಸ ರಾಜಕೀಯ ಪಕ್ಷ:
ಹೌದು, ತಮಿಳು ನಟ ವಿಜಯ್ ಬಳಿಕ ಇದೀಗ ಕನ್ನಡದ ನಟ ಚೇತನ್ ಅಹಿಂಸ (Chethan Ahimsa Political Party) ಸಹ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ದೇಶದಲ್ಲಿ ಈಗಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಗೆ ರಾಜಕೀಯ ಮಾಡುತ್ತಿದೆ. ಅಲ್ಲದೇ ಈಗಿನ ರಾಜಕಾರಣಿಗಳು ಹಾಗೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ದೂರಿದ್ದಾರೆ.
ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟುತ್ತೇವೆ:
ಬೆಳಗಾವಿ ಜಿಲ್ಲೆಯ ಕಾಗವಾಡ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್ ಅಹಿಂಸ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡದೆ ಬರೀ ಬೆಂಗಳೂರಿಗೆ ಆಧ್ಯತೆ ನೀಡುತ್ತಿದೆ. ಈ ಮೂಲಕ ಈ ಭಾಗದ ಜನರಿಗೆ, ಯುವಕರಿಗೆ ಅನ್ಯಾಯ ಮಾಡುತ್ತಿದೆ. ಜನರು ಇದರಿಂದ ರೋಸಿ ಹೋಗಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿ ಓಡಾಡಿ ಸಂವಿಧಾನದ ಆಶಯ ಎತ್ತಿ ಹಿಡಿಯುವ ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿದ್ದಾರೆ.
ಇದರ ಭಾಗವಾಗಿ ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿಸಿಕೊಂಡು ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ. ಇದಕ್ಕಾಗಿಯೇ ನಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. ಅಲ್ಲದೇ ಮುಂದಿನ ವರ್ಷ ಅಂದರೆ 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ, ಪಕ್ಷದ ಪ್ರಣಾಳಿಕೆ, ಪಕ್ಷದ ಧ್ವಜ, ರಾಜ್ಯ ಸಮಿತಿ ರಚನೆ ಸೇರಿದಂತೆ ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.
ಚೇತನ್ ಹೊಸ ಪಕ್ಷದ ಪ್ರಣಾಳಿಕೆ ಏನಿದೆ?
ಇನ್ನು, ಚೇತನ್ ಹೊಸ ಪಕ್ಷ ಕಟ್ಟುವುದಾಗಿ ಹೇಳುತ್ತಿದ್ದಂತೆ ಕರ್ನಾಟಕದ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಅಲ್ಲದೇ ಈ ಪಕ್ಷದ ಪ್ರಣಾಳಿಕೆ ಹೇಗಿರಬಹುದು ಎಂಬ ವಿಚಾರ ಸಹ ಸಾಕಷ್ಟು ಹರಿದಾಡುತ್ತಿದೆ. ಕೆಲ ಮೂಲಗಳ ವರದಿ ಪ್ರಕಾರ, ಸಮಾನ ಸಮಾಜ ಕಟ್ಟುವ ಉದ್ದೇಶದೊಂದಿಗೆ ಚೇತನ್ ತಮ್ಮ ಪಕ್ಷದ 10 ಪ್ರಮುಖ ಆಶಯ ಹೊಂದಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಲಿಂಗ ಸಮಾನತೆ, ಜಾತಿಯ ಸಮಾನತೆ, ಆರ್ಥಿಕ ಸಮಾನತೆ, ಭದ್ರತೆ, ಧರ್ಮ ನಿರಪೇಕ್ಷತೆ, ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ, ಪರಿವರ್ತನಾ ಪರಿಸರವಾದ, ಭ್ರಷ್ಟಾಚಾರ ವಿರೋಧಿ, ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಜೊತೆಗೆ ರಾಜ್ಯದಲ್ಲಿನ ಪೊಲೀಸ್ ಮತ್ತು ಜೈಲು ಸುಧಾರಣೆ ಹಾಗೂ ತಂತ್ರಜ್ಞಾನದ ಸದ್ಬಳಕೆಗೆ ಒತ್ತು ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ