newsics.com/ನ್ಯೂಸಿಕ್ಸ್
ಬಾಲಿವುಡ್ ನಟ ಆಮಿರ್ ಖಾನ್ ಅವರು ಇತ್ತೀಚೆಗೆ ನಟನೆಗಿಂತ, ಸಿನಿಮಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ಈ ನಿರ್ಮಾಣ ಸಂಸ್ಥೆಯಿಂದ ಡಾಕ್ಯುಮೆಂಟರಿ ಒಂದು ಬರಲಿದೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರೋಚಕ ಹಾಗೂ ಸ್ಪೂರ್ತಿದಾಯಕ ಜೀವನದ ಕುರಿತು ವಿಶೇಷ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಒಂದನ್ನು ಸಿದ್ಧಪಡಿಸಲು ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ.
ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಡಾಕ್ಯುಮೆಂಟರಿಯನ್ನು ನಿರ್ದೇಶಿಸುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯೊಂದರಿಂದ ಆರಂಭವಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗೆ ದ್ರೌಪದಿ ಮುರ್ಮು ಅವರು ನಡೆದುಬಂದ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತದೆ.
ಕಷ್ಟದ ದಿನಗಳು ಹಾಗೂ ಹಳ್ಳಿಯ ಜೀವನದ ಮರುಸೃಷ್ಟಿ:
ವರದಿಗಳ ಪ್ರಕಾರ, ಈ ಡಾಕ್ಯುಮೆಂಟರಿಯಲ್ಲಿ ದ್ರೌಪದಿ ಮುರ್ಮು ಅವರ ಜೀವನದ ಪ್ರಮುಖ ಘಟ್ಟಗಳನ್ನು ತೋರಿಸಲಾಗುತ್ತದೆ. ಒಡಿಶಾದ ಹಳ್ಳಿಯ ದಿನಗಳು, ಅವರ ಸಾರ್ವಜನಿಕ ಜೀವನದ ಪ್ರವೇಶ ಹಾಗೂ ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಸುಂದರ ಕ್ಷಣಗಳು ಇದರಲ್ಲಿ ಇರಲಿವೆ. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲಿ ಅವರು ಎದುರಿಸಿದ ಕಷ್ಟಗಳು, ಅವರು ಕಂಡ ಸಾವು-ನೋವುಗಳು ಮತ್ತು ಅವುಗಳನ್ನು ಮೆಟ್ಟಿ ನಿಂತ ಅವರ ಧೈರ್ಯದ ಕಥೆಯೂ ಇದರಲ್ಲಿ ಇರಲಿವೆ.
ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರದ ಕೆಲವು ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಅವರ ಬಾಲ್ಯದ ದಿನಗಳನ್ನು ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. 2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಮುರ್ಮು ಅವರು, ಈ ಹುದ್ದೆಗೇರಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ.
ಹಳೆಯ ಜೋಡಿ ಮತ್ತೆ ಒಂದಾಗಿ ಮುನ್ನಡೆ:
ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ‘ರುಬಾರು ರೋಶ್ನಿ’ (2019) ಸಾಕ್ಷ್ಯಚಿತ್ರವನ್ನು ಕೂಡ ಸ್ವಾತಿ ಚಕ್ರವರ್ತಿ ಅವರೇ ನಿರ್ದೇಶಿಸಿದ್ದರು. ಈಗ ಈ ಯಶಸ್ವಿ ಜೋಡಿ ದ್ರೌಪದಿ ಮುರ್ಮು ಅವರ ಬಯೋಪಿಕ್ ಮಾದರಿಯ ಡಾಕ್ಯುಮೆಂಟರಿಗಾಗಿ ಮತ್ತೊಮ್ಮೆ ಕೈಜೋಡಿಸಿದೆ.
ಸದ್ಯ ಆಮಿರ್ ಖಾನ್ ಪ್ರೊಡಕ್ಷನ್ಸ್ ಸಖತ್ ಬ್ಯುಸಿಯಾಗಿದೆ. ಆಮಿರ್ ಖಾನ್ ಅವರು ಸನ್ನಿ ಡಿಯೋಲ್ ನಟನೆಯ ಮತ್ತು ರಾಜ್ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಬಿಗ್ ಬಜೆಟ್ ಸಿನಿಮಾ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.