newsics.com/ನ್ಯೂಸಿಕ್ಸ್
ಬೆಂಗಳೂರು: ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಅಭಿವೃದ್ಧಿಯ ವೇಗ ಹೆಚ್ಚಿಸಲು ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ದಿಢೀರ್ ಎದುರಾದ ಖಾತೆ ತಕರಾರು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶ ಕಂಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ ಕಾರಣಕ್ಕೆ ಬೇಸರಗೊಂಡಿದ್ದ ರಾಮಲಿಂಗಾ ರೆಡ್ಡಿ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಾತೆ ಹಾಗೂ ಜ್ಯೇಷ್ಠತೆಯ ನಿರ್ಲಕ್ಷ್ಯದ ಕಾರಣಕ್ಕೆ ಮುನಿಯಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಕೆಲವು ವರ್ಗಾವಣೆ ವಿಚಾರದಲ್ಲಿ ಹಿರಿಯ ಸಚಿವರು ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ತಡರಾತ್ರಿ ಎಲ್ಲವೂ ಸುಖಾಂತ್ಯಗೊಂಡಿತು. ರಾಹುಲ್ ಗಾಂಧಿ ಜತೆ ಮಾತನಾಡಿದ ಬಳಿಕ ಮುನಿಯಪ್ಪ ಅವರ ಮುನಿಸು ತಣಿದರೆ, ತಡರಾತ್ರಿ ಸಿಎಂ ಡಿ.ಕೆ. ಶಿವಕುಮಾರ್ ಜತೆಗಿನ ಸಭೆಯ ಬಳಿಕ ರಾಮಲಿಂಗಾರೆಡ್ಡಿ ರಾಜೀನಾಮೆ ನಿಲುವಿನಿಂದ ಹಿಂದೆ ಸರಿದರು. ಶನಿವಾರ ಬೆಳಗ್ಗೆ ಅವರು ರಾಜೀನಾಮೆ ಪತ್ರ ಹಿಂಪಡೆಯುವ ಸಾಧ್ಯತೆಯಿದೆ.
ಸಚಿವ ಸ್ಥಾನಕ್ಕೆ ರೆಡ್ಡಿ ದಿಢೀರ್ ರಾಜೀನಾಮೆ, ಖಾತೆ ಬದಲಾವಣೆಗೆ ಮುನಿಯಪ್ಪ ಅವರ ಬಹಿರಂಗ ಬೇಡಿಕೆ, ವರ್ಗಾವಣೆ ವಿಚಾರದಲ್ಲಿ ಹಿರಿಯ ಸಚಿವರ ನಿಲುವು ಹಾಗೂ ಸತೀಶ್ ಜಾರಕಿಹೊಳಿ ಅವರ ಮಾತಿನ ಲಹರಿ, ಹಿರಿಯ ನಾಯಕ ಎಚ್.ಕೆ. ಪಾಟೀಲರು ಇದು ಎಚ್ಚರಿಕೆ ಗಂಟೆ ಎಂದು ನೀಡಿದ್ದ ಸಂದೇಶ ಸರ್ಕಾರ ಮತ್ತು ಸಂಘಟನೆಗೆ ಸವಾಲೊಡ್ಡಿತ್ತು. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿರಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿದ್ದ ಹೊತ್ತಲ್ಲೇ ನಡೆದ ಈ ಬೆಳವಣಿಗೆ ಮುಜುಗರಕ್ಕೀಡು ಮಾಡಿತ್ತು. ಕೊನೆಯಲ್ಲಿ ಎಲ್ಲವೂ ಸುಖಾಂತ್ಯವಾಯಿತು.
ಜಿಬಿಎ ಚುನಾವಣೆ ಎದುರಿಗಿರುವುದರಿಂದ ಸಾಕಷ್ಟು ಜವಾಬ್ದಾರಿ ಇದೆ, ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಬೆಂಗಳೂರಿನ ವಿಚಾರದಲ್ಲಿ ತಮ್ಮ ಮಾರ್ಗದರ್ಶನದಂತೆಯೇ ಮುಂದುವರಿಯಲಾಗುತ್ತದೆ. ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯಿರಿ. ಮುಂದೆ ಸೂಕ್ತ ಹೊಂದಾಣಿಕೆ ಮಾಡಲಾಗುವುದು. ಹೈಕಮಾಂಡ್ ಒಪ್ಪಿದರೆ ರಾಮಲಿಂಗಾರೆಡ್ಡಿ, ಮುನಿಯಪ್ಪ ಇಬ್ಬರಿಗೂ ಸೂಕ್ತ ಸಂದರ್ಭದಲ್ಲಿ ಹೆಚ್ಚುವರಿ ಖಾತೆ ಹಂಚಿಕೆ ಮಾಡುವ ಭರವಸೆಯನ್ನು ಸಿಎಂ ಡಿಕೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕರ ತೀರದ ಅಧಿಕಾರ ದಾಹವಾ? ಸಿದ್ದರಾಮಯ್ಯ ಎಫೆಕ್ಟಾ? ಡಿಕೆ ಸರ್ಕಾರಕ್ಕೆ ಸ್ವಪಕ್ಷವೇ ವೈರಿ!