newsics.com/ನ್ಯೂಸಿಕ್ಸ್
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ ಆರ್ಸಿಬಿ ದಾಖಲೆಯ ಗೆಲುವು ದಾಖಲಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ಗೇರಿದೆ.
ಸತತ ಎರಡನೇ ಬಾರಿಗೆ ಐಪಿಎಲ್ (IPL 2026) ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿರುವ ಹಾಲಿ ಚಾಂಪಿಯನ್ ಆರ್ಸಿಬಿ (RCB), ತಾನು ಏಕೆ ಮತ್ತೊಮ್ಮೆ ಚಾಂಪಿಯನ್ ಆಗಬೇಕು ಎಂಬುದನ್ನು ಕ್ವಾಲಿಫೈಯರ್ 1 ಪಂದ್ಯದಲ್ಲಿಯೇ ಸಾಬೀತುಪಡಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಾಯಕ ರಜತ್ ಪಾಟಿದರ್ (Rajat Patidar) ಅವರ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ದಾಖಲೆಯ 255 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್, ಆರ್ಸಿಬಿ ಬೌಲರ್ಗಳಿಗೆ ದಾಳಿಗೆ ನಲುಗಿ 162 ರನ್ಗಳಿಗೆ ಆಲೌಟ್ ಆಯಿತು. ಆದಾಗ್ಯೂ ಗುಜರಾತ್ಗೆ ಫೈನಲ್ಗೇರಲು ಇನ್ನೊಂದು ಅವಕಾಶವಿದ್ದು, ಕ್ವಾಲಿಫೈಯರ್ 2 ಅನ್ನು ಆಡಲಿದೆ. ಆ ಪಂದ್ಯದಲ್ಲಿ ಗೆದ್ದರೆ ಮತ್ತೆ ಫೈನಲ್ನಲ್ಲಿ ಆರ್ಸಿಬಿಯನ್ನು ಎದುರಿಸಲಿದೆ.ಮೇಲೆ ಹೇಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಮತ್ತು ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿದೆ.
ಆರ್ಸಿಬಿಗೆ ಉತ್ತಮ ಆರಂಭ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ 19 ರನ್ಗಳ ಇನ್ನಿಂಗ್ಸ್ ಆಡಿ ಔಟಾದರು. ಆದರೆ ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಪವರ್ಪ್ಲೇನಲ್ಲಿಯೇ 70 ರನ್ಗಳ ಗಡಿ ದಾಟಿಸಿದರು. ಜೊತೆಗೆ ಇವರಿಬ್ಬರು ಅರ್ಧಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಈ ವೇಳೆ ದಾಳಿಗಿಳಿದ ಜೇಸನ್ ಹೊಲ್ಡರ್ ಒಂದೇ ಓವರ್ನಲ್ಲಿ ಇವರಿಬ್ಬರನ್ನು ಔಟ್ ಮಾಡಿದರು.
ನಾಯಕನ ಇನ್ನಿಂಗ್ಸ್ ಆಡಿದ ರಜತ್
ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ 30 ರನ್ಗಳ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಬಾರಿಸಿದರು. ಅವರು ತಮ್ಮ ಇನ್ನಿಂಗ್ಸ್ನಲ್ಲಿ ಒಂಬತ್ತು ಸಿಕ್ಸರ್ಗಳು ಮತ್ತು ಐದು ಬೌಂಡರಿಗಳನ್ನು ಬಾರಿಸಿದರು. ಪಾಟಿದಾರ್ ಅವರ ಸ್ಟ್ರೈಕ್ ರೇಟ್ 281 ಕ್ಕಿಂತ ಹೆಚ್ಚಿತ್ತು. ಪಾಟಿದಾರ್ ಜೊತೆಗೆ, ಕೃನಾಲ್ ಪಾಂಡ್ಯ ಕೂಡ 43 ರನ್ ಗಳಿಸಿ ಆರ್ಸಿಬಿ 254 ತಲುಪಲು ಸಹಾಯ ಮಾಡಿದರು.
ಗುಜರಾತ್ ಬ್ಯಾಟಿಂಗ್ ವೈಫಲ್ಯ
255 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ನ ಬ್ಯಾಟಿಂಗ್ ಸಂಪೂರ್ಣವಾಗಿ ಕುಸಿಯಿತು. ಸಾಯಿ ಸುದರ್ಶನ್ 14 ರನ್ಗಳಿಗೆ ಹಿಟ್ ವಿಕೆಟ್ ಆದರೆ, ನಾಯಕ ಶುಭ್ಮನ್ ಗಿಲ್ ಕೇವಲ 2 ರನ್ಗಳಿಗೆ ಬೌಲ್ಡ್ ಆದರು. ವಿಕೆಟ್ ಕೀಪರ್ ಜೋಸ್ ಬಟ್ಲರ್ 11 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ನಿಶಾಂತ್ ಸಿಂಧು 5 ರನ್ ಗಳಿಸಿ ಔಟಾದರೆ, ವಾಷಿಂಗ್ಟನ್ ಸುಂದರ್ ಕೂಡ 8 ರನ್ ಗಳಿಸಿ ಔಟಾದರು. ಜೇಸನ್ ಹೋಲ್ಡರ್ಗೆ ತಮ್ಮ ಖಾತೆಯನ್ನು ತೆರೆಯಲೂ ಸಾಧ್ಯವಾಗಲಿಲ್ಲ. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಾಹುಲ್ ತೆವಾಟಿಯಾ 68 ರನ್ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇತ್ತ ಆರ್ಸಿಬಿ ಪರ ವೇಗಿ ಜಾಕೋಬ್ ಡಫಿ ಮೂರು ವಿಕೆಟ್ಗಳನ್ನು ಪಡೆರೆ, ಜೋಶ್ ಹ್ಯಾಜಲ್ವುಡ್, ರಸಿಕ್ ಸಲಾಂ ದಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಇವರಲ್ಲದೆ, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.