newsics.com | ನ್ಯೂಸಿಕ್ಸ್
ತಿರುಪ್ಪೂರು(ತಮಿಳುನಾಡು): ತಿರುಪ್ಪೂರು ಜಿಲ್ಲೆಯ ಉತ್ತುಕುಳಿ ಬಳಿ ಕಾರು, ಡೀಸೆಲ್ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೇಲಂನ ಸ್ವಾಮಿನಾಥಪುರಂ ಪ್ರದೇಶದ ನಿವಾಸಿ ಹೇಮಾ, ಅವರ ಪತಿ ಮುಗಿಲನ್, ತಂದೆ ಈಶ್ವರನ್, ತಾಯಿ ತಿರುಮಗಲ್, ಅಜ್ಜಿ ಶಿವಗಾಮಿ ಮತ್ತು ಮಕ್ಕಳಾದ ಶ್ರೀನಿತ್ತು ಮತ್ತು ಕಾನೀಶ್ ಪಲ್ಲಡಂ ಪ್ರದೇಶದಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ ನಂತರ, ಅವರು ಉತ್ತುಕುಳಿ ಮೂಲಕ ಸೇಲಂನ ಸ್ವಾಮಿನಾಥಪುರಂಗೆ ಹಿಂತಿರುಗುತ್ತಿದ್ದರು. ಅವರ ಕಾರು ಉತ್ತುಕುಳಿ ಬಳಿಯ ಕಕ್ಕಪಲ್ಲಂ ತಲುಪುತ್ತಿದ್ದಂತೆ, ವಿಜಯ ಮಂಗಲಂನಿಂದ ಉತ್ತುಕುಳಿ ಕಡೆಗೆ ವೇಗವಾಗಿ ಬರುತ್ತಿದ್ದ ಡೀಸೆಲ್ ಟ್ಯಾಂಕರ್ ಲಾರಿ ಅವರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.
ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ಕೆಲವರಿಗೆ ಮಾರಣಾಂತಿಕ ಗಾಯಗಳಾಗಿವೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿರುವುದು ಈ ಪ್ರದೇಶದಲ್ಲಿ ಭಾರೀ ಆತಂಕವನ್ನುಂಟುಮಾಡಿದೆ.