newsics.com | ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೀಟರ್ ಬಡ್ಡಿ ಕಿರುಕುಳ ಮತ್ತು ಸಾಲದ ಸುಳಿಗೆ ಸಿಲುಕಿ ಆಟೋ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.
ಜೀ ಯೌಸುಫ್ ಜಮಾಲ್ದ್ದಿನ್ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇಂದು ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸ್ನೇಹಿತರಿಗೆ ವಿಡಿಯೋ ಕಳುಹಿಸಿ ಆತ್ಮಹತ್ಯೆ
ಯೌಸುಫ್ ಜಮಾಲ್ದ್ದಿನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾನು ವಿಷ ಕುಡಿಯುವ ದೃಶ್ಯವನ್ನು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ತಮ್ಮ ಸ್ನೇಹಿತರಿಗೆ ರವಾನಿಸಿದ್ದಾರೆ. ಆ ವಿಡಿಯೋದಲ್ಲಿ ತಾವು ಮಾಡಿಕೊಂಡಿದ್ದ ಸಾಲದ ವಿವರ ಹಾಗೂ ಸಕಾಲಕ್ಕೆ ಬಡ್ಡಿ ಕಟ್ಟದಿದ್ದಾಗ ಹಣ ನೀಡಿದವರು ನೀಡುತ್ತಿದ್ದ ಅತಿಯಾದ ಕಿರುಕುಳದ ಬಗ್ಗೆ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಆಟೋ ಚಾಲಕನ ಸಾವಿಗೆ ಕಾರಣವಾದ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆಯನ್ನು ಕೈಗೊಂಡಿದ್ದಾರೆ.