newsics.com | ನ್ಯೂಸಿಕ್ಸ್
ಚಿಕ್ಕಬಳ್ಳಾಪುರ: ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44 ರ ದೊಡ್ಡಪೈಲಗುರ್ಕಿ ಗಡಿ ಬಳಿ ಇಂದು ಮುಂಜಾನೆ ರಸ್ತೆ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಕರ್ನೂಲಿನಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಆಂಧ್ರ ರಸ್ತೆ ಸಾರಿಗೆ ಸಂಸ್ಥೆಯ (APSRTC) ಬಸ್, ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲೇ ಇಬ್ಬರು ದುರ್ಮರಣ
ಬಸ್ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಬಸ್ ಚಾಲಕ, ಆಂಧ್ರ ಮೂಲದ ಲಕ್ಷ್ಮಣ್ (52) ಹಾಗೂ ಬಸ್ನಲ್ಲಿದ್ದ ಪ್ರಯಾಣಿಕ, ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಉಮಾಕಾಂತ್ ರಾವ್ (77) ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ನಲ್ಲಿದ್ದ ಇನ್ನು ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತದ ರಭಸಕ್ಕೆ ಚಾಲಕ ಲಕ್ಷ್ಮಣ್ ಅವರು ಸೀಟಿನಲ್ಲೇ ಸಿಲುಕಿ ಒದ್ದಾಡಿ ಪ್ರಾಣಬಿಟ್ಟಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ, ಕ್ರೇನ್ ಮೂಲಕ ನಜ್ಜುಗುಜ್ಜಾಗಿದ್ದ ಬಸ್ನ ಮುಂಭಾಗವನ್ನು ಕತ್ತರಿಸಿ ಚಾಲಕನ ಮೃತದೇಹವನ್ನು ಹೊರತೆಗೆದರು. ಇನ್ನು ವೃದ್ಧ ಪ್ರಯಾಣಿಕ ಉಮಾಕಾಂತ್ ಅವರ ಶವವನ್ನು ಬಸ್ನ ಕಿಟಕಿ ಗಾಜನ್ನು ಒಡೆದು ಹೊರತೆಗೆಯಲಾಯಿತು.
ಸ್ಥಳಕ್ಕೆ ಪೇರೆಸಂದ್ರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿಯಂತ್ರಿಸಲು ಅಪಘಾತಕ್ಕೀಡಾಗಿದ್ದ ಬಸ್ ಹಾಗೂ ಲಾರಿಯನ್ನು ಕ್ರೇನ್ ಬಳಸಿ ಪಕ್ಕಕ್ಕೆ ಸರಿಸಲಾಗಿದ್ದು, ಸದ್ಯ ವಾಹನ ಸಂಚಾರವನ್ನು ಸುಗಮಗೊಳಿಸಲಾಗಿದೆ. ಈ ಕುರಿತು ಪೇರೆಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Rain alert ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ: ಉತ್ತರ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ