newsics.com| ನ್ಯೂಸಿಕ್ಸ್
ಪಲಮು (ಜಾರ್ಖಂಡ್): ಇಲ್ಲಿನ ಪದ್ವಾ ಬ್ಲಾಕ್ನ ಸಿಕ್ಕಾ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಒಂದೇ ಕುಟುಂಬದ ಐದು ಸದಸ್ಯರು ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಜೂನ್ 19 ರಂದು ಸಿಕ್ಕಾ ನಿವಾಸಿ ಕುಲದೀಪ್ ಮಹಾತೋ ಮೊದಲು ಸಾವನ್ನಪ್ಪಿದ್ದರು. ಆ ಬಳಿಕ ಅವರ ಮಗಳು ಬಬಿತಾ ಕುಮಾರಿ ಜೂನ್ 20 ರಂದು ನಿಧನರಾದರು. ಅವರ ಎರಡನೇ ಮಗಳು, ಇಂದು ಕುಮಾರಿ ಜೂನ್ 26 ರಂದು ಹಾಗೂ ಅವರ ಸೊಸೆ ಶ್ವೇತಾ ಕುಮಾರಿ ಜೂನ್ 28 ರಂದು ಮತ್ತು ಅವರ ಮಗ ನಕುಲ್ ಮಹತೋ ಜೂನ್ 29 ರಂದು ಸಾವನ್ನಪ್ಪಿದ್ದಾರೆ.
ಸೊಸೆ ಶ್ವೇತಾ ಕುಮಾರಿ ಮತ್ತು ಮಗ ನಕುಲ್ ಮಹತೋ ಆರ್ಐಎಂಎಸ್ನಲ್ಲಿ ಮೃತಪಟ್ಟಿದ್ದಾರೆ. ಕುಲದೀಪ್ ಮಹಾತೋ ಅವರ ಪತ್ನಿ ಲಖೋ ದೇವಿ, ಒಬ್ಬ ಮಗ ಮತ್ತು ಮೊಮ್ಮಗ ಎಲ್ಲರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಡೀ ಕುಟುಂಬವು ನಿಗೂಢ ಕಾಯಿಲೆಯಿಂದ ಬಳಲುತ್ತಿದೆ. ಊತದ ನಂತರ ಈ ಸಾವುಗಳು ಸಂಭವಿಸಿವೆ.
ಮೊದಲ ಮೂವರು ಮೃತರ ಮರಣೋತ್ತರ ಪರೀಕ್ಷೆಗಳನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಮೃತರ ಎಲ್ಲಾ ಅಂಗಾಂಗಗಳ ಮಾದರಿಗಳನ್ನು ಸಂರಕ್ಷಿಸಲಾಗಿದೆ. ಅವುಗಳನ್ನು FSL ಪರೀಕ್ಷೆಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುಟುಂಬ ಚಿತಾಭಸ್ಮ ಸೇವಿಸುತ್ತಿತ್ತೇ?:
ಆರೋಗ್ಯ ಇಲಾಖೆಯ ತಂಡವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ನಡೆಸುತ್ತಿದೆ. ಈ ವೇಳೆ, ಹಲವಾರು ಆಘಾತಕಾರಿ ಸಂಗತಿಗಳು ಕಂಡುಬಂದಿವೆ. ಕುಲದೀಪ್ ಮಹಾತೋ ಮತ್ತು ಅವರ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾದ ನಂತರ ಭೂತೋಚ್ಚಾಟನೆಯನ್ನು ಆಶ್ರಯಿಸುತ್ತಿತ್ತು.
ಕುಲದೀಪ್ ಮಹಾತೋ ಮತ್ತು ಅವರ ಮಗಳು ಬಬಿತಾ ಕುಮಾರಿ ಅವರ ಮರಣದ ನಂತರ, ಇಡೀ ಕುಟುಂಬವು ಚಿಕಿತ್ಸೆ ಪಡೆಯುವ ನೆಪದಲ್ಲಿ ಲೆಸ್ಲೀಗಂಜ್ನ ಪೂರ್ಣದಿಹ್ ಪ್ರದೇಶಕ್ಕೆ ಹೋಗಿತ್ತು. ಈ ಸಮಯದಲ್ಲಿ ಕುಟುಂಬವು ಬಹಳ ಸಮಯದಿಂದ ಚಿತಾಭಸ್ಮವನ್ನು ಸೇವಿಸುತ್ತಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ತಂಡವು ಸಿಕ್ಕಾ ಗ್ರಾಮ ಮತ್ತು ಪೂರ್ಣದಿಹ್ಗೆ ಭೇಟಿ ನೀಡಿದೆ. ಕುಟುಂಬವು ಸೇವಿಸುತ್ತಿದ್ದ ಚಿತಾಭಸ್ಮದ ಮಾದರಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ.
ಎರಡು ತಂಡಗಳ ರಚನೆ:
ವೈದ್ಯರು ಈ ಕುಟುಂಬವನ್ನು ಕನಿಷ್ಠ ನಾಲ್ಕು ಬಾರಿ ಸಂರಕ್ಷಣೆ ಮಾಡುವ ಕೆಲಸ ಮಾಡಿದೆ. ಆದರೆ, ಅವರು ಚಿತಾಭಸ್ಮವನ್ನು ಸೇವಿಸುವುದನ್ನು ಮುಂದುವರಿಸಿದ್ದರು ಎಂಬುದು ತಜ್ಞರ ತಂಡದ ತನಿಖೆ ವೇಳೆ ಬಯಲಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಸೇವಿಸಿದ್ದಾರೆ ಎನ್ನಲಾದ ಚಿತಾಭಸ್ಮದ ಮಾದರಿಗಳನ್ನು ವೈದ್ಯರ ತಂಡ ಸಂಗ್ರಹಿಸಿದೆ. ಅಷ್ಟೇ ಅಲ್ಲ ಕುಟುಂಬದ ಆಹಾರ ಪದ್ಧತಿಗಳ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಬಗೆಗಿನ ಮಾಹಿತಿಯನ್ನು ಕಲೆ ಹಾಕಲು ತಂಡಗಳನ್ನು ಎರಡೂ ಗ್ರಾಮಗಳಿಗೆ ಕಳುಹಿಸಲಾಗಿದೆ. ಈ ಇಡೀ ಘಟನೆಯ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪಲಮು ಸಿವಿಲ್ ಸರ್ಜನ್, ಡಾ. ಅನಿಲ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಆರ್ಐಎಂಎಸ್ನಲ್ಲಿ ಐದನೇ ಸಾವು ಸಂಭವಿಸಿದೆ ಎಂದು ಪಠಾಣ್ ವೈದ್ಯಕೀಯ ಅಧಿಕಾರಿ ಶ್ರವಣ್ ಕುಮಾರ್ ಹೇಳಿದ್ದಾರೆ. ಮೃತರು ಚಿತಾಭಸ್ಮವನ್ನು ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ತಮ್ಮ ತಂಡದೊಂದಿಗೆ ಗ್ರಾಮಕ್ಕೆ ವೈಯಕ್ತಿಕವಾಗಿ ಭೇಟಿ ನೀಡಿದ್ದಾರೆ ಮತ್ತು ಸೇವಿಸಿದ ಆಹಾರ ಮತ್ತು ಪಾನೀಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪಠಾಣ್ ಮಾಹಿತಿ ನೀಡಿದ್ದಾರೆ.
ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ. ಆರ್ಕೆ ರಂಜನ್ ಅವರು ಮೃತರ ಎಲ್ಲ ಒಳಾಂಗಗಳನ್ನು ಸಂರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಅವುಗಳನ್ನು ಪರೀಕ್ಷೆಗೆ ರವಾನಿಸಿದ್ದಾರೆ. ಕುಟುಂಬ ಸದಸ್ಯರು ಸೇವಿಸಿದ ಸಾಸಿವೆ ಎಣ್ಣೆಯನ್ನು ಸಹ ಪರೀಕ್ಷಿಸಲು ವೈದ್ಯರು ನಿರ್ಧರಿಸಿದ್ದಾರೆ. ಸಂಪೂರ್ಣ ತನಿಖೆ ಬಳಿಕ ಸಾವಿನ ನಿಖರ ಕಾರಣ ತಿಳಿದುಬರುವ ಸಾಧ್ಯತೆ ಇದೆ.
Gruhajyoti scheme ಗೃಹಜ್ಯೋತಿ ದುರ್ಬಳಕೆಗೆ ಬ್ರೇಕ್: ಮನೆ ಮನೆಗೂ ಬರಲಿದೆ ಹೊಸ ಅರ್ಜಿ!
Wanted… ಪ್ರೇಮಿಗಳನ್ನು ಬೇರೆ ಬೇರೆ ಮಾಡಲು ಬೇಕಾಗಿದ್ದಾರೆ ಚೀಫ್ ಬ್ರೇಕಪ್ ಆಫಿಸರ್! ತಿಂಗಳ ಸಂಬಳ 2.8 ಲಕ್ಷ ರೂ.!