newsics. com| ನ್ಯೂಸಿಕ್ಸ್
ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನೀಡುತ್ತಿದ್ದ ನಿರಂತರ ಮಾನಸಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಬೇಸತ್ತು 28 ವರ್ಷದ ಯುವ ಉದ್ಯಮಿಯೊಬ್ಬರು ತಮ್ಮ ಬಟ್ಟೆ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಫರೀದಾಬಾದ್ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುವ ಮುನ್ನ ಯುವಕ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬವೇ ಕಾರಣ ಎಂದು ಆರೋಪಿಸಿದ್ದಾರೆ.
ಪೋಸ್ಟ್ ಮಾಡಿದ ವಿಡಿಯೋದಲ್ಲಿ, ತಮ್ಮ ಪತ್ನಿ ಜ್ಯೋತಿ, ಅತ್ತೆ ವೀಣಾ, ಮಾವ ಬಿಟ್ಟು ಮತ್ತು ಪತ್ನಿಯ ಸಹೋದರಿ ನೀತು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಮನೆಯಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಸೇರಿದಂತೆ ಎಲ್ಲಾ ಗೃಹಕೃತ್ಯದ ಕೆಲಸಗಳನ್ನು ನಾನೇ ಮಾಡುತ್ತಿದ್ದರೂ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು. ನನ್ನ ವಿರುದ್ಧ ಸುಳ್ಳು ಕೇಸ್ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಲಾಗುತ್ತಿತ್ತು. ಇದರಿಂದಾಗಿ ನಾನು ತೀವ್ರ ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದೇನೆ. ನನ್ನ ಸಾವಿಗೆ ಅವರೇ ಜವಾಬ್ದಾರರು, ಅವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು. ನನ್ನ ಸಾವಿನ ನಂತರ ನನ್ನ ಆಸ್ತಿಯು ನನ್ನ ತಾಯಿ, ಸಹೋದರಿ ಮತ್ತು ಸಹೋದರರಿಗೆ ಸೇರಬೇಕು” ಎಂದು ರಾಹುಲ್ ವಿಡಿಯೋದಲ್ಲಿ ವಿನಂತಿಸಿದ್ದಾರೆ.
ಪ್ರೇಮ ವಿವಾಹ ತಂದಿಟ್ಟ ದುರಂತ:
ಕುಟುಂಬಸ್ಥರ ಪ್ರಕಾರ, ರಾಹುಲ್ ಎರಡು ವರ್ಷಗಳ ಹಿಂದೆ ಜ್ಯೋತಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿ ಜ್ಯೋತಿ, ರಾಹುಲ್ ತನ್ನ ಹೆತ್ತವರೊಂದಿಗೆ ಇರುವುದನ್ನು ಇಷ್ಟಪಡುತ್ತಿರಲಿಲ್ಲ. ಹೀಗಾಗಿ ರಾಹುಲ್ ಹೆತ್ತವರಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಾಹುಲ್ಗೆ ತನ್ನ ತಂದೆ-ತಾಯಿಯನ್ನು ಭೇಟಿಯಾಗಲು ಸಹ ಪತ್ನಿ ಬಿಡುತ್ತಿರಲಿಲ್ಲ ಎಂದು ರಾಹುಲ್ ಸೋದರ ಅಮಿತ್ ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪತ್ನಿ ಆತನ ವಿರುದ್ಧ ಹಲ್ಲೆಯ ಸುಳ್ಳು ದೂರು ದಾಖಲಿಸಿದ್ದು, ಇದು ರಾಹುಲ್ ಅವರ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು ಎನ್ನಲಾಗಿದೆ.
ಅಂಗಡಿಯಲ್ಲೇ ಅಂತ್ಯ:
ನಾಲ್ಕು ತಿಂಗಳ ಹಿಂದೆಯಷ್ಟೇ ರಾಹುಲ್ ಹೊಸದಾಗಿ ರೆಡಿಮೇಡ್ ಬಟ್ಟೆ ಅಂಗಡಿಯೊಂದನ್ನು ತೆರೆದಿದ್ದರು. ಭಾನುವಾರ ಬೆಳಗ್ಗೆ ಮನೆಯಲ್ಲಿ ತಾಯಿಯನ್ನು ಭೇಟಿಯಾದ ಬಳಿಕ ಎಂದಿನಂತೆ ಅಂಗಡಿಗೆ ತೆರಳಿದ್ದರು. ಆದರೆ ಅಲ್ಲಿಗೆ ಹೋದ ಕೆಲವೇ ಸಮಯದ ನಂತರ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಅಂಗಡಿಯ ಒಳಗಡೆಯೇ ನೇಣು ಬಿಗಿದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಸೋದರ ತಕ್ಷಣವೇ ಅಂಗಡಿಗೆ ಧಾವಿಸಿ, ಬಾಗಿಲು ಮುರಿದು ನೋಡಿದಾಗ ರಾಹುಲ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ತನಿಖೆ:
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ತನಿಖಾಧಿಕಾರಿ ಸಂಜಯ್ ಕುಮಾರ್ ಮತ್ತು ತಂಡ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಾಹುಲ್ ಕುಟುಂಬಸ್ಥರ ದೂರಿನ ಮೇರೆಗೆ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ