newsics.com/ನ್ಯೂಸಿಕ್ಸ್
ನವದೆಹಲಿ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ನಂತರ ದೀದಿಯ ಟಿಎಂಸಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಂತೂ ಕನ್ಫರ್ಮ್. ಅದರಂತೆ, ಒಬ್ಬೊಬ್ಬ ನಾಯಕರಾಗಿ ಟಿಎಂಸಿ ತೊರೆದು ಬಿಜೆಪಿಯತ್ತ (BJP) ಮುಖಮಾಡಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ(INDIA)ದ ಮಹತ್ವದ ಸಭೆಯಲ್ಲಿ ಭಾಗವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಟಿಎಂಸಿ ಸಂಸದರು ಬಿಗ್ ಶಾಕ್ ನೀಡಿದ್ದು, ಟಿಎಂಸಿಯ ಸುಮಾರು 20 ಸಂಸದರು ಎನ್ಡಿಎಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮ್ಮ ಈ ನಿಲುವನ್ನು ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ಸೋಮವಾರ ಹೇಳಿಕೊಂಡ ನಂತರ ಟಿಎಂಸಿಯಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಪಕ್ಷದಲ್ಲಿ ದೊಡ್ಡ ಮಟ್ಟದ ಭಿನ್ನಮತ ಉಂಟಾಗಿ ಈಗ ಎರಡು ಹೋಳಾಗಿದೆ.
ಈ ಬಂಡಾಯ ಬಣದ ನಾಯಕಿಯಾಗಿ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಗುರುತಿಸಬೇಕೆಂದು ಸ್ಪೀಕರ್ ಅವರಿಗೆ ಕೋರಲಾಗಿದೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಅರೂಪ್ ಚಕ್ರವರ್ತಿ, ಪಾರ್ಥ ಭೌಮಿಕ್, ಶತಬ್ದಿ ರಾಯ್, ಜಗದೀಶ್ ವಸುನಿಯಾ, ಜೂನ್ ಮಾಲಿಯಾ ಸೇರಿದಂತೆ ಪ್ರಮುಖ ನಾಯಕರಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಒಟ್ಟು 28 ಸಂಸದರನ್ನು ಹೊಂದಿದ್ದು, ಅವರಲ್ಲಿ 20 ಸಂಸದರು ಬಂಡಾಯ ಎದ್ದಿರುವುದರಿಂದ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಮಟ್ಟದಲ್ಲಿ ಭಾರೀ ರಾಜಕೀಯ ಹಿನ್ನಡೆಯಾಗಿದೆ.