newsics.com/ನ್ಯೂಸಿಕ್ಸ್
ಅಸಮರ್ಪಕ ಜೀವನಶೈಲಿ ಕಾರಣದಿಂದ ರಾಜ್ಯದಲ್ಲಿ ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುವವರ ಪ್ರಮಾಣ ಹೆಚ್ಚಾಗಿದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಈ ಆರೋಗ್ಯ ಸಮಸ್ಯೆಗಳು ಏರಿಕೆ ಕಂಡಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (ಎನ್ಎಫ್ಎಚ್ಎಸ್-6)ರ ವರದಿಯಲ್ಲಿ ಈ ಆತಂಕಕಾರಿ ಅಂಶ ಬಹಿರಂಗಗೊಂಡಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರ ಹಾಗೂ ಸುತ್ತಲ ಗ್ರಾಮೀಣ ಪ್ರದೇಶಗಳಲ್ಲೂ ಫಿಟ್ನೆಸ್, ವೆಲ್ನೆಸ್ ಸೆಂಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವುದರ ಜತೆಗೆ, ಸ್ಥೂಲ ಕಾಯದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಬೊಜ್ಜು ಮತ್ತು ಸಾಂಕ್ರಾಮಿಕವಲ್ಲದ ಈ ರೋಗಗಳು ಹೆಚ್ಚುತ್ತಿವೆ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆಯ ನೆರಳು ಇನ್ನೂ ಪೂರ್ಣವಾಗಿ ಮರೆಯಾಗಿಲ್ಲ ಎಂಬುದನ್ನೂ ಈ ವರದಿ ಹೇಳುತ್ತಿದೆ.
ಬಿಪಿ/ಶುಗರ್, ಪುರುಷರೇ ಮುಂಚೂಣಿ:
ಬೊಜ್ಜು ಹೆಚ್ಚಾದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಕೂಡ ಹೆಚ್ಚಾಗಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಾಗಿದೆ. 2023-24ರಲ್ಲಿ ಪುರುಷರಲ್ಲಿಅತಿ ಹೆಚ್ಚು ಸಕ್ಕರೆ ಮಟ್ಟ ಇರುವವರ ಪ್ರಮಾಣ ಶೇ. 7.6 ರಿಂದ ಶೇ. 17.8 ರಷ್ಟಕ್ಕೆ ಏರಿಕೆಯಾಗಿದೆ. ಮಹಿಳೆಯರಲ್ಲಿ ಈ ಪ್ರಮಾಣ ಶೇ. 6.8ರಿಂದ ಶೇ. 14.8ರಷ್ಟಿದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಔಷಧ ತೆಗೆದುಕೊಳ್ಳುತ್ತಿರುವ ಅಥವಾ ಹೈ-ಶುಗರ್ ಹೊಂದಿರುವ ಒಟ್ಟು ಪುರುಷರ ಪ್ರಮಾಣ ಶೇ.15.6ರಿಂದ ಶೇ 29.7ರವರೆಗೆ ದಾಖಲಾಗಿದ್ದರೆ, ಮಹಿಳೆಯರಲ್ಲಿ ಇದು ಶೇ. 25.0ರಿಂದ ಶೇ. 27.8ರಷ್ಟಿದೆ.
ಮಧುಮೇಹದಂತೆಯೇ ರಕ್ತದೊತ್ತಡ ಅಥವಾ ಹೈಪರ್ಟೆನ್ಷನ್ ಸಮಸ್ಯೆಯಲ್ಲೂ ಪುರುಷರೇ ಮುಂಚೂಣಿಯಲ್ಲಿದ್ದಾರೆ. ನಗರದಲ್ಲಿ ಹೈ ಬಿಪಿ ಇರುವ ಒಟ್ಟು ಪುರುಷರ ಪ್ರಮಾಣ ಗರಿಷ್ಠ ಶೇ. 32.4ರಷ್ಟಿದ್ದು, ಮಹಿಳೆಯರ ಗರಿಷ್ಠ ಪ್ರಮಾಣ ಶೇ. 27.8 ರಷ್ಟಿದೆ.
ಸ್ತ್ರೀಯರಲ್ಲಿ ಸ್ಥೂಲಕಾಯ ಶೇ.51.7
ಗಂಭೀರ ವಿಚಾರವೆಂದರೆ, ವರದಿ ಪ್ರಕಾರ ನಗರ ಪ್ರದೇಶದ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 51.7ರಷ್ಟು ಮಹಿಳೆಯರು ಸ್ಥೂಲಕಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾಗದಲ್ಲೂ ಶೇ.33ರಷ್ಟು ಮಹಿಳೆಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟಾರೆ ರಾಜ್ಯದ ಮಹಿಳೆಯರ ಬೊಜ್ಜಿನ ಪ್ರಮಾಣವು ಎನ್ಎಫ್ಎಚ್ಎಸ್-5 ರಲ್ಲಿದ್ದ ಶೇ. 30.2 ರಿಂದ ಶೇ. 41.2ಕ್ಕೆ ಏರಿಕೆ ಕಂಡಿದೆ. ನಗರದ ಶೇ. 42.9 ಮತ್ತು ಗ್ರಾಮೀಣ ಭಾಗದ ಶೇ. 31.1ರಷ್ಟು ಜನ ಅತಿಯಾದ ತೂಕ ಹೊಂದಿದ್ದು, ರಾಜ್ಯದ ಒಟ್ಟು ಪುರುಷರು ಎದುರಿಸುತ್ತಿರುವ ಬೊಜ್ಜಿನ ಸಮಸ್ಯೆ ಪ್ರಮಾಣವು ಶೇ. 30.9ರಿಂದ ಶೇ. 36.4ಕ್ಕೆ ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 18.6ರಷ್ಟು ಮಹಿಳೆಯರು ಮತ್ತು ಶೇ. 18.4ರಷ್ಟು ಪುರುಷರು ಇಂದಿಗೂ ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದು, ಅಪೌಷ್ಟಿಕತೆಯ ಸವಾಲು ಜೀವಂತವಾಗಿದೆ.
ರಾಜ್ಯದ ಸರಾಸರಿಯಲ್ಲಿ ಅಪೌಷ್ಟಿಕತೆ ಕೊಂಚ ಸುಧಾರಿಸಿದ್ದು, ಮಹಿಳೆಯರಲ್ಲಿ ಶೇ. 15.1ಕ್ಕೆ ಹಾಗೂ ಪುರುಷರಲ್ಲಿ ಶೇ. 14ಕ್ಕೆ ಇಳಿಕೆಯಾಗಿದೆ ಎಂಬುದನ್ನೂ ವರದಿ ಉಲ್ಲೇಖಿಸಿದೆ. ಇದು ರಾಜ್ಯದ ಜನತೆಯಲ್ಲಿ ತೂಕದ ಸಮತೋಲನ ತಪ್ಪಿದೆ ಎಂಬುದಕ್ಕೆ ನಿದರ್ಶನ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಖ್ಯಾತ ಯೂಟ್ಯೂಬರ್ ಮರಿದಾಸ್ ಅರೆಸ್ಟ್