newsics.com/ನ್ಯೂಸಿಕ್ಸ್
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದ ವೃದ್ಧೆಗೆ ಮತ್ತು ಬರುವ ಲಡ್ಡು ಮತ್ತು ಜ್ಯೂಸ್ ನೀಡಿ ಅಸ್ವಸ್ಥರನ್ನಾಗಿಸಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಬೆಂಗಳೂರಿನ ಜೆಪಿ ನಗರ ನಿವಾಸಿ ಪ್ರೇಮಾ(70) ಚಿನ್ನಾಭರಣ ಕಳೆದುಕೊಂಡವರು. ಮೇ 23ರಂದು ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಅವರು ಮೇ 25 ರಂದು ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯಕ್ಕೆ ಆಗಮಿಸಿದ್ದಾರೆ.
ದೇವರ ದರ್ಶನ ಮುಗಿಸಿ ರಾತ್ರಿ 9.45 ರ ಸುಮಾರಿಗೆ ವಾಪಸ್ ಊರಿಗೆ ಹೋಗಲು ಮುಖ್ಯದ್ವಾರದ ಮುಂಭಾಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಕುಳಿತುಕೊಂಡಿದ್ದಾರೆ. ಅವರ ಪಕ್ಕದಲ್ಲಿಯೇ ಕುಳಿತಿದ್ದ ಅಪರಿಚಿತ ವ್ಯಕ್ತಿ ಮಾತನಾಡಿಸಿ ತಾನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿ ಲಡ್ಡು ಪ್ರಸಾದ ಕೊಟ್ಟು ನಂತರ ಜ್ಯೂಸ್ ಬಾಟಲಿಯಿಂದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾನೆ. ಪ್ರೇಮಾ ಅವರು ಸಲ್ಪ ಜ್ಯೂಸ್ ಕುಡಿದು ವಾಪಸ್ ಕೊಟ್ಟಿದ್ದು ನಂತರ ಅಸ್ವಸ್ಥರಾಗಿದ್ದಾರೆ.
ದೇವಾಲಯದ ಮಹಾದ್ವಾರದ ಬಳಿ ಇರುವ ಕಟ್ಟೆಯ ಬಳಿಗೆ ಅವರನ್ನು ಕರೆದುಕೊಂಡು ಹೋಗಿ ಅಪರಿಚಿತ ಕೂರಿಸಿದ್ದಾನೆ. ಉಪಾಯವಾಗಿ ಅವರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ದೋಚಿ ಬಸ್ ನಲ್ಲಿ ಸೀಟು ಇದೆಯಾ ಎಂದು ನೋಡಿಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಅಸ್ವಸ್ಥಗೊಂಡಿದ್ದ ಪ್ರೇಮಾ ಅವರನ್ನು ಗಮನಿಸಿದವರು ಉಜಿರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಮಾ ಅವರ ಕೊರಳಲ್ಲಿದ್ದ ಚಿನ್ನದ ಸರ, ಪರ್ಸ್ ನಲ್ಲಿದ್ದ ಬಳೆ, ಚಿನ್ನದ ಸರ, 7 ಸಾವಿರ ರೂ. ನಗದು ಸೇರಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣ ದೋಚಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.