newsics.com/ನ್ಯೂಸಿಕ್ಸ್
ಬೆಂಗಳೂರಿನ ಕಿತ್ತುಹೋಗಿರುವ ರಸ್ತೆ, ಟ್ರಾಫಿಕ್ ಜಾಮ್ ನಿಂದಾಗಿ ಅಭ್ಯರ್ಥಿಗಳು UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ.
ವೈಟ್ಫೀಲ್ಡ್, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಗೇಟ್ ಕ್ಲೋಸ್ ಆಗಿದೆ. ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಕ್ಕೆ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಇದರಿಂದಾಗಿ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಯ ಶ್ರಮ ಕೊನೇ ಕ್ಷಣದಲ್ಲಿ ವಿಫಲವಾಗಿದೆ.
ಹದಗೆಟ್ಟ ರಸ್ತೆಯಿಂದಾಗಿ ಪರೀಕ್ಷಾ ಕೇಂದ್ರ ತಲುಪಲು ತಡವಾಗಿದೆ. ಹಾಗಾಗಿ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಎಂದು ವಿದ್ಯಾರ್ಥಿ ಪ್ರಮೋದ್ ಬೇಸರ ವ್ಯಕ್ತಪಡಿಸಿದ್ದಾರೆ. ವೈಟ್ಫೀಲ್ಡ್ನಲ್ಲಿರುವ ತನ್ನ ಮನೆಯಿಂದ ಮುಂಜಾನೆ 7 ಗಂಟೆಗೆ ಹೊರಟಿದ್ದೆ. ಮೆಜೆಸ್ಟಿಕ್ನಿಂದ ಪರೀಕ್ಷಾ ಕೇಂದ್ರದವರೆಗೆ ಆಟೋದಲ್ಲಿ ಬಂದಿದ್ದೇನೆ. ವೈಟ್ಫೀಲ್ಡ್ , ಮಹಾದೇವಪುರ ರಸ್ತೆ ಸರಿಯಿಲ್ಲದ ಕಾರಣ, ಆಟೋಗಳು ಬರಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ತಲುಪುವಾಗ ತಡವಾಗಿದೆ. ಹಾಗಾಗೊ ಪರೀಕ್ಷೆ ಬರೆಯಲು ಕೇಂದ್ರದ ಒಳಗೆ ಬಿಟ್ಟಿಲ್ಲ. ಗೇಟ್ ಹಾಕಿದ್ದಾರೆ ಎಂದರು.
ಈ ಸಂಬಂಧ ಯುಪಿಎಸ್ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಅಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಬೆಂಗಳೂರಿನ ರೋಡ್ಗಳ ಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ. ಹೀಗಾಗಿ ಮನವಿಯನ್ನು ದಯವಿಟ್ಟು ಪರಿಗಣಿಸಿ ಎಂದಿದ್ದೆ. ಆದರೆ ಪ್ರವೇಶದ ಸ್ಕ್ರೀನಿಂಗ್ ಕ್ಲೋಸ್ ಹಿನ್ನಲೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ವಿದ್ಯಾರ್ಥಿ ಅಳಲುತೋಡಿಕೊಂಡಿದ್ದಾರೆ.
ಇದೇ ವೇಳೆ ಇನ್ನೂ ನಾಲ್ಕೈದು ಅಭ್ಯರ್ಥಿಗಳಿಗೂ ಇದೇ ಸ್ಥಿತಿ. ಬೆಂಗಳೂರಿನ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ತಡವಾಗಿದೆ. ರಸ್ತೆ ಗುಂಡಿ, ಟ್ರಾಫಿಕ್ ಜಾಮ್ ನಿಂದಾಗಿ ಬೇಗ ಹೊರಟರೂ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಪರೀಕ್ಷೆ ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಕಂಗಾಲಾಗಿರುವ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.