newsics.com/ನ್ಯೂಸಿಕ್ಸ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಇನ್ನು ಮುಂದೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತಿಲ್ಲ. ಬದಲಿಗೆ ಗಡೀಪಾರು ಮಾಡಲು ಅವರನ್ನು ನೇರವಾಗಿ ಗಡಿ ಭದ್ರತಾ ಪಡೆ ಯೋಧರಿಗೆ (ಬಿಎಸ್ಎಫ್) ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆದೇಶಿಸಿದ್ದಾರೆ.
ಮೇ 20 ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದ್ದು, ರಾಜ್ಯ ಪೊಲೀಸ್ ಮತ್ತು ರೈಲ್ವೆ ರಕ್ಷಣಾ ಪಡೆಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರದ ಈ ಹೊಸ ಕಾರ್ಯವಿಧಾನದ ಪ್ರಕಾರ, ಪೌರತ್ವ (ತಿದ್ದುಪಡಿ) ಕಾಯ್ದೆಯಡಿ ಪೌರತ್ವ ಪಡೆಯಲು ಅರ್ಹರಲ್ಲದ ಅಕ್ರಮ ವಲಸಿಗರನ್ನು ನ್ಯಾಯಾಲಯಕ್ಕೆ ಕಳುಹಿಸುವ ಬದಲು ನೇರವಾಗಿ ಬಿಎಸ್ಎಫ್ ಗಡಿ ಠಾಣೆಗಳಿಗೆ ಕರೆದೊಯ್ಯಲಾಗುತ್ತದೆ.
ಇದು ಭಾರತವನ್ನು ಪ್ರವೇಶಿಸುವ ವಿದೇಶಿ ಪ್ರಜೆಗಳ ಮೇಲಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅನುಸರಿಸುವ ಪ್ರಕ್ರಿಯೆಗಿಂತ ಸಂಪೂರ್ಣ ಭಿನ್ನವಾದ ಹೆಜ್ಜೆಯಾಗಿದೆ.
ಗುರುವಾರ ಹೌರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ಅಕ್ರಮ ವಲಸಿಗರನ್ನು ಹೌರಾ ನಿಲ್ದಾಣದಲ್ಲಿ ಬಂಧಿಸಿದರೆ ಅವರನ್ನು ನ್ಯಾಯಾಲಯಕ್ಕೆ ಕಳುಹಿಸಬಾರದು ಎಂದು ಪೊಲೀಸ್ ಆಯುಕ್ತರು ಮತ್ತು ಆರ್ಪಿಎಫ್ಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಅಂಥವರಿಗೆ ಸರಿಯಾಗಿ ಊಟ ನೀಡಿ, ಬೊಂಗಾವ್ನ ಪೆಟ್ರಾಪೋಲ್ ಗಡಿಯಲ್ಲಿರುವ ಅಥವಾ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ನಲ್ಲಿರುವ ಬಿಎಸ್ಎಫ್ ಯೋಧರಿಗೆ ನೇರವಾಗಿ ಒಪ್ಪಿಸಬೇಕು ಎಂದರು. ಅಲ್ಲದೆ, ಇಂತಹ ಬಂಧಿತರ ಸಾಪ್ತಾಹಿಕ ವರದಿಯನ್ನು ಡಿಜಿಪಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಕಳುಹಿಸುವಂತೆಯೂ ಅವರು ಸೂಚಿಸಿದ್ದಾರೆ.