newsics.com/ನ್ಯೂಸಿಕ್ಸ್
ಗೌತಮ ಬುದ್ಧ ಜನಿಸಿದ ಗಯಾದ ಬಳಿಯ ಈ ಗ್ರಾಮ ಸದ್ಯ ತನ್ನ ವಿಶಿಷ್ಟ ಸಂಪ್ರದಾಯದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶತಮಾನಗಳಿಂದ ತಮ್ಮ ಪೂರ್ವಜರು ಅನುಸರಿಸುತ್ತಿದ್ದ ಆಹಾರ ಪದ್ದತಿಯನ್ನು ಮುಂದುವರೆಸಿರುವ ಇವರು, ಆಧುನಿಕ ಜೀವನಶೈಲಿಯಲ್ಲೂ ಯಾವುದೇ ಬದಲಾವಣೆಗೆ ಒಳಗಾಗದೇ ತಮ್ಮ ಪುರಾತನ ಆಹಾರ ಪದ್ಧತಿಯನ್ನು ಮುಂದುವರೆಸಿದ್ದಾರೆ.
ಬಿಹಾರದ ಗಯಾಜಿಲ್ಲೆಯ ಚಿಲಂ ಗ್ರಾಮದ ಸುಮಾರು 2,000 ನಿವಾಸಿಗಳು ತತ್ವಬದ್ಧವಾಗಿ ಮಾಂಸಾಹಾರಿ ಆಹಾರವನ್ನು ಬೇಯಿಸುವುದು ಅಥವಾ ಸೇವಿಸುವುದರಿಂದ ದೂರವಿದ್ದಾರೆ. ತಲೆಮಾರುಗಳು ಬದಲಾದರೂ ಈ ಗ್ರಾಮಸ್ಥರು ಈ ಆಹಾರ ಪದ್ಧತಿ ಬಗ್ಗೆ ಯಾವುದೇ ಅಸಮಾಧಾನ ಅಥವಾ ಬದಲಾವಣೆ ಇಲ್ಲದೇ ಮುಂದುವರೆಸಿರುವುದು ವಿಶೇಷವಾಗಿದೆ.
ಶೇರ್ಘಾಟಿ ಬ್ಲಾಕ್ನಲ್ಲಿರುವ ಚಿಲಂ ಸ್ಥಳೀಯವಾಗಿ ಚೀಲಿಮ್ ಎಂದು ಕರೆಯುವ ಈ ಗ್ರಾಮದಲ್ಲಿ ಶತಮಾನಗಳಿಂದಲೂ ಮಾಂಸಾಹಾರದ ಯಾವುದೇ ಪದಾರ್ಥಗಳನ್ನು ಮಾರಾಟ ಮಾಡುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿನ 300 ಮನೆಗಳಲ್ಲೂ ಇಂದಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಯೇ ಇಲ್ಲ. ಇದರ ಬಳಕೆ ತಮ್ಮ ಸಂಪ್ರದಾಯದ ನಂಬಿಕೆಯ ವಿರುದ್ಧ ಎಂಬುದಾಗಿ ಇವರು ನಂಬಿದ್ದಾರೆ.
ಈ ಗ್ರಾಮಸ್ಥರು ತಮ್ಮ ಆಹಾರ ಪದ್ದತಿಯಲ್ಲಿ ಎಷ್ಟು ಕಟ್ಟುನಿಟ್ಟು ಎಂದರೆ, ಗ್ರಾಮದ ಹೊರಗೆ ನಡೆಯುವ ಯಾವುದೇ ಮುದವೆ ಅಥವಾ ಸಾಮಾಜಿಕ ಸಮಾರಂಭಗಳಿಗೆ ಭಾಗಿಯಾದರೆ, ತಮ್ಮ ಮನೆಯಿಂದಲೇ ಬುತ್ತಿಯನ್ನು ಕೊಂಡೊಯ್ಯುತ್ತಾರೆ. ಕಾರಣ, ಸಮಾರಂಭಗಳಲ್ಲಿ ಬಳಕೆಯಾಗುವ ಪಾತ್ರೆಗಳು ಮಾಂಸದ ಅಡುಗೆಗೆ ಬಳಕೆಯಾಗಿರಬಹುದು ಎಂಬ ಅಂಜಿಕೆ.
ಗ್ರಾಮದ ಹಿರಿಯರಾಗಿ ಶಿವಶಂಕರ್ ಪಾಸ್ವಾನ್ ಮಾತನಾಡಿ. ಈ ಸಂಪ್ರದಾಯವು ನಮ್ಮ ಪೂರ್ವಜರಿಂದ ಬಂದಿದ್ದು, ಅದನ್ನು ಇಂದಿಗೂ ನಿತ್ಯದ ಜೀವನದಲ್ಲಿ ಅನುಕರಿಸುತ್ತಿದ್ದೇವೆ. ನಮ್ಮ ಗ್ರಾಮಸ್ಥರು ಹೊರಗೆ ಪ್ರಯಾಣ ಬೆಳೆಸಿದಾಗ ಆಹಾರ ಮತ್ತು ನೀರನ್ನು ಕೂಡ ಕೊಂಡೊಯ್ಯುತ್ತಾರೆ. ಕಾರಣ ಅಲ್ಲಿ ಮಾಂಸಹಾರದ ಪಾತ್ರೆಗಳನ್ನು ಅಡುಗೆಗೆ ಬಳಕೆ ಮಾಡಬಹುದು ಎಂಬ ಕಾರಣ. ನನ್ನ ಈ 60 ವರ್ಷದ ಜೀವನದಲ್ಲಿ ನಾನು ಅನ್ನವನ್ನು ತಿಂದಿಲ್ಲ. ಕೇವಲ ರೊಟ್ಟಿ ಮತ್ತು ಸಟ್ಟು ಸೇವಿಸುತ್ತೇನೆ. ನಾನು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನೂ ಕೂಡಾ ಸೇವಿಸಿಲ್ಲ ಎಂದರು.
ಶಿವ ಗುರು, ಮಾತೆ ಗಾಯತ್ರಿ ಮತ್ತು ಜೈ ಗುರುದೇವ್ ಬೋಧನೆಗಳಿಗೆ ಸಂಬಂಧಿಸಿದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಿಂದ ಈ ಗ್ರಾಮವು ಸಾಕಷ್ಟು ಪ್ರಭಾವಿತವಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ. ಮಾಂಸ, ಮದ್ಯ ಮತ್ತು ಮೊಟ್ಟೆಗಳ ಸೇವನೆಯು ಸ್ವೀಕಾರಾರ್ಹವಲ್ಲ. ಗ್ರಾಮದಲ್ಲಿ ಮಾಂಸಾಹಾರಿ ಆಹಾರವನ್ನು ಬೇಯಿಸುವ ಕುಟುಂಬಗಳು ಪ್ರತ್ಯೇಕಗೊಳ್ಳುವ ಅಪಾಯವನ್ನು ಎದುರಿಸುತ್ತವೆ.
ಗ್ರಾಮದ ಯಾರಾದರೂ ಮಾಂಸಾಹಾರ ಬೇಯಿಸಿದರೆ, ಅವರ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸಲಾಗುವುದು ಎಂದು ನಿವಾಸಿಗಳು ಹೇಳುತ್ತಾರೆ.
ಹಳೆಯ ತಲೆಮಾರುಗಳು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದರೂ, ಕೆಲ ಯುವ ಗ್ರಾಮಸ್ಥರು ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಅವುಗಳನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ಆದರೂ ಸಹ, ಮಾಂಸ ಸೇವನೆ ಮಾಡದಿರುವುದುಮಾತ್ರ ಪ್ರಶ್ನಾತೀತವಾಗಿಯೇ ಉಳಿದಿದೆ.
ಗ್ರಾಮದ ಯುವಕ ಬಿಟ್ಟು ಕುಮಾರ್ ಮಾತನಾಡಿ, ಚಿಲಂನಲ್ಲಿ ಸಸ್ಯಾಹಾರಿ ಪದ್ಧತಿ ದಶಕಗಳಿಂದಲೂ ಇದ್ದು, ನನ್ನ ಜೀವನದಲ್ಲಿ ಎಂದೂ ಮಾಂಸಾಹಾರವನ್ನು ಸೇವಿಸಿಲ್ಲ. ಮದುವೆಗೆ ನಮ್ಮ ಗ್ರಾಮದಿಂದ ಹೊರಟಾಗ, ಎಲ್ಲಾ ಅತಿಥಿಗಳು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿರುತ್ತಾರೆ ಎಂದು ಆತಿಥೇಯರಿಗೆ ಮುಂಚಿತವಾಗಿ ತಿಳಿಸಲಾಗುತ್ತದೆ. ಮಾಂಸಾಹಾರಿ ಆಹಾರದ ಸುಳಿವು ಇದ್ದರೆ, ಅನೇಕ ಗ್ರಾಮಸ್ಥರು ಹಾಜರಾಗುವುದಿಲ್ಲ ಅಥವಾ ಏನು ತಿನ್ನದೇ ಹಿಂತಿರುಗುತ್ತಾರೆ ಎನ್ನುತ್ತಾರೆ ಅವರು.
ಈ ಪ್ರದೇಶವು ಒಂದು ಕಾಲದಲ್ಲಿ ಕೋಲ್ ಭಿಲ್ ಆಡಳಿತಗಾರನ ಕೋಟೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಹಳೆಯ ಕೋಟೆಯ ರಚನೆಯನ್ನು ಹೋಲುವ ಅವಶೇಷಗಳನ್ನು ಇನ್ನೂ ಕಾಣಬಹುದು. ಇಲ್ಲಿನ ನಿವಾಸಿಗಳು ಈ ಗ್ರಾಮವು ಕನಿಷ್ಠ 400 ರಿಂದ 500 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಿದ್ದಾರೆ.
ಈ ಗ್ರಾಮಕ್ಕೆ ಈ ಹೆಸರು ಬಂದ ಬಗ್ಗೆ ಹೇಳುವುದಾದರೆ, ಒಂದು ಕಾಲದಲ್ಲಿ ಚಿಲಂ ಪೈಪ್ ಮೂಲಕ ತಂಬಾಕು ಸೇದುವುದಕ್ಕೆ ಹೆಸರುವಾಸಿಯಾಗಿತ್ತು ಎಂದು ಜನರು ಹೇಳುತ್ತಾರೆ.
ದೇವೇಂದ್ರ ಗುಪ್ತಾ ಅವರಂತಹ ನಿವಾಸಿಗಳು ಹೇಳುವಂತೆ, ಈ ಗ್ರಾಮವು ಹೆಸರಿಗಿಂತ ಹೆಚ್ಚಾಗಿ ದೇಶದ ಅತಿದೊಡ್ಡ ಸಸ್ಯಾಹಾರಿ ಪ್ರದೇಶವಾಗಿತ್ತು. ನಮ್ಮ ಪೂರ್ವಜರು ನೂರಾರು ವರ್ಷಗಳಿಂದ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿದ್ದರು. ನಾವು ಅದೇ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ. ಇಡೀ ಗ್ರಾಮವು ಆಳವಾದ ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದೆ ಎಂದು ಹೇಳಿದ್ದಾರೆ.
ಮಕ್ಕಳಿಗೆ ಈಜು ಕಲಿಸುವಾಗ ದುರಂತ; ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ