newsics.com/ನ್ಯೂಸಿಕ್ಸ್
ಚಿಕ್ಕಮಗಳೂರು : ಪ್ರತಿ ಮಳೆಗಾಲದಲ್ಲಿ ಅತಿವೃಷ್ಟಿ ಪರಿಸ್ಥಿತಿ ಅನುಭವಿಸುವ ಮಲೆನಾಡು ಭಾಗದ ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲೇ ತೀವ್ರವಾಗಿ ಅಂತರ್ಜಲ ಮಟ್ಟ ಕುಸಿದಿರುವುದು ಆತಂಕ ಮೂಡಿಸಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸ್ಥಿರವಾಗಿತ್ತು. ಆದರೆ, ಈ ವರ್ಷ ಸಾಕಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಮಲೆನಾಡು ಸೇರಿದಂತೆ ಬಯಲು ಭಾಗದಲ್ಲಿ ಜನವರಿ ತನಕವೂ ಧಾರಾಕಾರ ಮಳೆ ಸುರಿದಿತ್ತು. ಬಹುತೇಕ ಎಲ್ಲ ಕೆರೆ, ಕಟ್ಟೆಗಳು ತುಂಬಿದ್ದವು. ಆದರೆ, ಈ ಬಾರಿ ಬಿಸಿಲಿನ ತಾಪ ಹೆಚ್ಚಾಗುವ ಜತೆಗೆ ಈವರೆಗೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ.
ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಹಾಗೂ ತುಂಗಾ, ಭದ್ರಾ ನದಿಗಳು ಹರಿಯುವ ಕೊಪ್ಪ ಹಾಗೂ ನರಸಿಂಹರಾಜಪುರದಲ್ಲಿ ಸರಾಸರಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ವರ್ಷ ಕೊಪ್ಪದಲ್ಲಿ ಹೆಚ್ಚು ಇಳಿಕೆ ಕಂಡು ಬಂದಿತ್ತು. ಈ ವರ್ಷ ನರಸಿಂಹರಾಜಪುರ ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಇಳಿಕೆಯಾಗಿದೆ.
ತರೀಕೆರೆ, ಕಡೂರು, ಅಜ್ಜಂಪುರ ತಾಲೂಕಿನಲ್ಲಿ ಕಳೆದ 10 ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. 2014 ರಲ್ಲಿ ಕಡೂರು ತಾಲೂಕಿನಲ್ಲಿ ಸರಾಸರಿ 20.31 ಇದ್ದ ಅಂತರ್ಜಲ ಮಟ್ಟ 2017ರ ವೇಳೆಗೆ 27.86 ಮೀಟರ್ ಆಳಕ್ಕೆ ಹೋಗಿತ್ತು. ಬಳಿಕ 2022 ರಲ್ಲಿ 8.22 ಮೀಟರ್ಗೆ ಏರಿಕೆಯಾಗಿತ್ತು. ಬರಗಾಲ ಇದ್ದ ಕಾರಣ 2024 ರಲ್ಲಿ 12.22 ಮೀಟರ್ ಇತ್ತು. ಆದರೆ, 2025 ರಲ್ಲಿ ಉತ್ತಮ ಮಳೆಯಾದ ಕಾರಣ ಕಳೆದ ವರ್ಷ 7.94 ಮೀಟರ್ಗೆ ಏರಿಕೆಯಾಗಿತ್ತು. ಆದರೆ, ಕಳೆದ ವರ್ಷ 12.60 ಮೀಟರ್ನಿಂದ ಈ ವರ್ಷ 13.94 ಮೀಟರ್ಗೆ ಇಳಿಕೆಯಾಗಿದೆ.
ಅಜ್ಜಂಪುರ ತಾಲೂಕಿನಲ್ಲಿ ಕಳೆದ ವರ್ಷ 11.93 ಮೀಟರ್ ಇದ್ದ ಅಂತರ್ಜಲ ಮಟ್ಟ ಈ ವರ್ಷ 12.85 ಮೀಟರ್ಗೆ ಇಳಿದಿದ್ದರೆ, ತರೀಕೆರೆ ತಾಲೂಕಿನಲ್ಲಿ 10.65 ಮೀಟರ್ನಿಂದ 11.85 ಮೀಟರ್ಗೆ ಕುಸಿದಿದೆ.
ಮಲೆನಾಡು ಭಾಗದ ತಾಲೂಕುಗಳಾದ ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಂತರ್ಜಲ ಮಟ್ಟ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶೃಂಗೇರಿ ತಾಲೂಕಿನಲ್ಲಿ ಕಳೆದ ವರ್ಷ 8.43 ಮೀಟರ್ಗೆ ಇಳಿಕೆಯಾಗಿದ್ದ ಅಂತರ್ಜಲ ಈ ವರ್ಷ 8.41 ಮೀಟರ್ಗೆ ಏರಿಕೆಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 10.69 ಮೀಟರ್ನಿಂದ 10.65 ಮೀಟರ್ಗೆ ಏರಿಕೆ ಕಂಡುಬಂದಿದೆ.