newsics.com / ನ್ಯೂಸಿಕ್ಸ್
ಮೈಸೂರು: ನಗರದ ಮೇಟಗಹಳ್ಳಿಯಲ್ಲಿ ಇರುವ ಜಯದೇವ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 11 ಜನ ರೋಗಿಗಳು ಸಾವನ್ನಪ್ಪಿದ್ದಾರೆ.
ಸೈಯ್ಯದ್ ಆರೀಫ್ ಪಾಷಾ(80), ಹರೀಶ್ ಬಿ.ಆರ್.(40), ಬಾಲಶಂಕರ್ (65), ಸಂಶುನ್ನೀಶ (70), ರಾಜು ( 54), ನಿಂಗೇಗೌಡ (70), ಮಸೀನಾ ಬಾನು( 58), ಗೋಪಾಲರಾಜು (55), ಬೈರೋಜಿ ರಾವ್ (80), ಸುಹಾಲ್ ಖಾನ್ (43) , ನೀಲಿ (79) ಮೃತಪಟ್ಟವರು.
ಈ ಸಾವುಗಳಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ವಿಡಿಯೋಗಳನ್ನು ವೈರಲ್ ಮಾಡಿರುವ ಕುರಿತಂತೆ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾನಂದ ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಹೇಳಿದ್ದಾರೆ
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ದಾಖಲಾದ 11 ಮಂದಿ ಸಾವನ್ನಪ್ಪಿದ ಬಗ್ಗೆ ರೋಗಿಗಳ ಸಂಬಂಧಿಕರು ವಿಡಿಯೋ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವಿಡಿಯೋದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು, ವ್ಯವಸ್ಥೆ ಸರಿ ಇಲ್ಲ ಎಂದು ಆರೋಪ ಮಾಡಿದ್ದರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸದಾನಂದ ವಿವರಣೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸದಾನಂದ, “ಆಸ್ಪತ್ರೆಯಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ವೈದ್ಯರ ಕೊರತೆ ಇರಲಿಲ್ಲ. ನಮ್ಮ ಆಸ್ಪತ್ರೆ ತೃತೀಯ ಹಂತದ (Tertiary Care) ರೆಫರಲ್ ಆಸ್ಪತ್ರೆಯಾಗಿದ್ದು, ಮೈಸೂರು ಸೇರಿದಂತೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಇಲ್ಲಿ ದಾಖಲಿಸಲಾಗುತ್ತದೆ. ಸಾಮಾನ್ಯ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ದೊರೆಯುತ್ತದೆ. ಜೀವಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಮಾತ್ರ ನಮ್ಮ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ ಎಂದು ಹೇಳಿದರು.
ನಿನ್ನೆ ಬೆಳಗ್ಗೆ 8 ಗಂಟೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಇದು ಸಾಮಾನ್ಯಕ್ಕಿಂತ ಹೆಚ್ಚು ಸಂಖ್ಯೆಯಾಗಿದ್ದರೂ, ಮೃತಪಟ್ಟವರಲ್ಲಿ ಬಹುತೇಕರು ತೀವ್ರ ಹೃದಯಾಘಾತ, ಹೃದಯ ವೈಫಲ್ಯ ಹಾಗೂ ವಯೋಸಹಜ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೆಲವರು ಆಸ್ಪತ್ರೆಗೆ ದಾಖಲಾಗುವ ವೇಳೆಯೇ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು ಎಂದು ತಿಳಿಸಿದರು.
ಆಸ್ಪತ್ರೆಯ ಅಂಕಿ – ಅಂಶಗಳನ್ನು ಉಲ್ಲೇಖಿಸಿದ ಅವರು, 2025ರಲ್ಲಿ ಒಟ್ಟು 21,500ಕ್ಕೂ ಹೆಚ್ಚು ದಾಖಲಾತಿಗಳ ಪೈಕಿ 1,845 ಸಾವುಗಳು ಸಂಭವಿಸಿದ್ದು, ಆಸ್ಪತ್ರೆಯ ಮರಣ ಪ್ರಮಾಣ ಶೇ. 5.7ರಷ್ಟಿದೆ. ಕಳೆದ ಹಲವು ವರ್ಷಗಳ ಸರಾಸರಿ ಮರಣ ಪ್ರಮಾಣ ಶೇ. 6 ರಿಂದ 8ರಷ್ಟಿದ್ದು, ಇದು ತೃತೀಯ ಹಂತದ ರೆಫರಲ್ ಆಸ್ಪತ್ರೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಕೊಳ್ಳಲಾದ ಪ್ರಮಾಣವಾಗಿದೆ ಎಂದು ಹೇಳಿದರು.
ಇದೇ ವೇಳೆ, ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ ಎಂಬ ಆರೋಪವನ್ನು ಸದಾನಂದ ತಳ್ಳಿಹಾಕಿದರು. ನಿನ್ನೆ 24 ಗಂಟೆಗಳ ಕಾಲ ಕರ್ತವ್ಯದಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲೇ ಇದ್ದರು. ಜೊತೆಗೆ ಇಬ್ಬರು ಡಿಎಮ್ ತರಬೇತಿ ವೈದ್ಯರು ಸೇರಿದಂತೆ ಒಟ್ಟು ಮೂವರು ವೈದ್ಯರು ರಾತ್ರಿ ಪೂರ್ತಿ ಕರ್ತವ್ಯ ನಿರ್ವಹಿಸಿದ್ದಾರೆ. ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಿದ್ದು, ಸಂಬಂಧಿಕರೊಂದಿಗೂ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿಸಿದರು.
ವೈದ್ಯರು ಇರಲಿಲ್ಲ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ. ವೈದ್ಯರು ವಿಶ್ರಾಂತಿಗಾಗಿ ಮೀಸಲಿಟ್ಟ ಕೊಠಡಿಯಲ್ಲಿ ಇದ್ದ ಸಂದರ್ಭ ಖಾಲಿ ಕುರ್ಚಿಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗಿದೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿ ಇವೆ ಎಂದರು.