newsics.com/ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ನಾಳೆ ಭಾನುವಾರ (ಮೇ 10) ರಂದು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಪ್ರಯುಕ್ತ ಪ್ರಧಾನಿಯವರಿಗೆ ಕರ್ನಾಟಕ ಬಿಜೆಪಿ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದ್ದು, ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿರುವ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ತಾತ್ಕಾಲಿಕ ಸಂಚಾರ-ನಿಲುಗಡೆ ನಿರ್ಬಂಧಿತ ಸ್ಥಳಗಳು
ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿ
ಹೆಚ್ಎಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್ನಿಂದ ಗೇಟ್ ನಂ.30 ರವರೆಗೆ
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್ಡಿ ರಸ್ತೆ ಜಂಕ್ಷನ್ನಿಂದ ಟ್ರಿನಿಟಿ ಜಂಕ್ಷನ್
ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಎಲ್ಲೆಲ್ಲಿ ವಾಹನ ನಿಲುಗಡೆ ಸ್ಥಳಗಳು
ಗಣ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ- ಹೆಚ್.ಎ.ಎಲ್ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಪಾರ್ಕಿಂಗ್ (ಎಸ್.ಡಿ ರಸ್ತೆ ಜಂಕ್ಷನ್). ಹೆಚ್ಎಎಲ್ ಬಸ್ ಯಾರ್ಡ್ ಪಾರ್ಕಿಂಗ್ (ಸುರಂಜನ್ ದಾಸ್ ರಸ್ತೆ). ಸಾರ್ವಜನಿಕರಿಗೆ- 08:30ರ ಒಳಗಾಗಿ ಏರ್ಪೋರ್ಟ್ ಎಕ್ಸಿಟ್ ರಸ್ತೆ ಗೇಟ್ ನಂ 2 ಮಾರ್ಗವಾಗಿ ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಾಗಬೇಕು.ನಗರದ ಒಳಗಿನಿಂದ ತುಮಕೂರು ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಎಡ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು.
ಮಾಗಡಿ ರಸ್ತೆಯಿಂದ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು, ನಗರದಿಂದ ಮಾಗಡಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಎಡ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ (ಕೆಂಗೇರಿ) ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ ಮತ್ತು ಹೊಸಕೆರೆಹಳ್ಳಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಎಡ ಮತ್ತು ಬಲ ತಿರುವು ಪಡೆದು ಔಟರ್ರಿಂಗ್ ರಸ್ತೆಯಲ್ಲಿ ಸಾಗಬೇಕು.
ಪ್ರಧಾನಿ ಮೋದಿಯವರ ಕಾರ್ಯಕ್ರಮದತ್ತ ಮಾರತಹಳ್ಳಿ, ಕೆ.ಆರ್.ಪುರ ಮತ್ತು ವೈಟ್ಫೀಲ್ಡ್ ಕಡೆಯಿಂದ ಬರುವ ಸವಾರರು ತಮ್ಮ ವಾಹನಗಳನ್ನು ಬೆಳಗ್ಗೆ 08.30 ಗಂಟೆಯ ಒಳಗಾಗಿ ಏರ್ಪೋರ್ಟ್ ನಿರ್ಗಮನ ರಸ್ತೆ ಗೇಟ್ ನಂ.02 ಬಳಿ ಪ್ರಯಾಣಿಕರನ್ನು ಇಳಿಸಬೇಕು. ಬಳಿಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ.