newsics.com/ನ್ಯೂಸಿಕ್ಸ್
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ ಅವರ ಕೊಲೆ ಪ್ರಕರಣ ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಎಸ್ಐಟಿಯನ್ನು ರಚಿಸಲಾಗಿದೆ. ಚಂದ್ರನಾಥ ರಥ್ ಹತ್ಯೆಯ ತನಿಖೆಗಾಗಿ ಮೀಸಲಾದ ಎಸ್ಐಟಿಯನ್ನು ರಚಿಸಲಾಗಿದೆ. ಈ ತಂಡಕ್ಕೆ ಇನ್ಸ್ಪೆಕ್ಟರ್ ಜನರಲ್ (ಐಜಿ) ಮಟ್ಟದ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರನಾಥ ರಥ್ ಅವರನ್ನು ಬುಧವಾರ ತಡರಾತ್ರಿ ಉತ್ತರ 24 ಪರಗಣದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಕೆಲವೇ ದಿನಗಳ ಮೊದಲು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರಗೊಂಡಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಹಂತಕರಿಗಾಗಿ ಪೊಲೀಸರು ದೊಡ್ಡ ಪ್ರಮಾಣದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ.
ಈಗಾಗಲೇ ಚಂದ್ರನಾಥ್ ರಥ ಅವರ ಮೃತದೇಹದ ಶವಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಅವರಿಗೆ ಮೂರು ಗುಂಡೇಟಿನ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. 7.6 ಬೋರ್ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್ನಿಂದ ಅವರನ್ನು ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಎಸ್ಐಟಿ ರಚಿಸಲಾಗಿದ್ದು, ವಿವಿಧ ಜಿಲ್ಲೆಗಳು ಮತ್ತು ವಿಶೇಷ ಘಟಕಗಳ ಪೊಲೀಸ್ ಸಿಬ್ಬಂದಿ ಈ ಎಸ್ಐಟಿಯ ಭಾಗವಾಗಿರುತ್ತಾರೆ. ಈ ತಂಡವು ಪ್ರಕರಣದ ಪ್ರತಿಯೊಂದು ಹಂತವನ್ನು ಪರಿಶೀಲಿಸುತ್ತದೆ. ಹಲವಾರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಪ್ರಮುಖ ಶೂಟರ್ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರಾಥಮಿಕ ವಿವರಗಳ ಪ್ರಕಾರ, ನಿನ್ನೆ ರಾತ್ರಿ 10.30ರ ಸುಮಾರಿಗೆ ಉತ್ತರ 24 ಪರಗಣದ ಮಧ್ಯಮಗ್ರಾಮ್ ಪ್ರದೇಶದಲ್ಲಿ ಕೊಲೆ ನಡೆದಿದೆ. ಚಂದ್ರನಾಥ್ ರಥ ಕೊಲ್ಕತ್ತಾದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಸ್ಕಾರ್ಪಿಯೋ ಡೊಹ್ರಿಯಾ ಪ್ರದೇಶವನ್ನು ತಲುಪಿದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸ್ಕಾರ್ಪಿಯೋದ ಎಡಭಾಗದಿಂದ ಗುಂಡಿನ ದಾಳಿ ನಡೆಸಿ, ಚಂದ್ರನಾಥ್ನನ್ನು ಕೊಂದಿದ್ದಾರೆ.
ಗುಂಡಿನ ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಂದ್ರನಾಥ್ ಅವರ ಎದೆ, ಹೊಟ್ಟೆ ಮತ್ತು ಮುಖಕ್ಕೆ ಗುಂಡು ತಗುಲಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಬರುವಾಗಲೇ ಅವರು ಮೃತಪಟ್ಟಿದ್ದರು. ಅವರ ಚಾಲಕನಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.