newsics.com/ನ್ಯೂಸಿಕ್ಸ್
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಗಣನೀಯ ಏರಿಕೆಗೆ ಮಾಜಿ ಶಿಕ್ಷಣ ಸಚಿವ ಎಚ್ ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜ್ಯದಾದ್ಯಂತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಶಿಕ್ಷಕರ ಕೊರತೆ ಎಲ್ಲಾ ಕಡೆಯೂ ಇದೆ. ಆದರೆ ಎಸ್ ಎಸ್ ಎಲ್ ಸಿ ಫಲಿತಾಂಶ ನೋಡಿದರೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಫಲಿತಾಂಶ ಬಂದಿದೆ.
ಈ ಕುರಿತು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾನು ಕೂಡ ಶಿಕ್ಷಣ ಸಚಿವನಾಗಿದ್ದವನು. ಇಂಟರ್ನಲ್ ಮಾರ್ಕ್ಸ್ 20 ಕ್ಕೆ 20 ಅನ್ನು ಕೊಡುತ್ತಾರೆ. ಇನ್ನು ಉಳಿದ 80 ಮಾರ್ಕ್ಸ್ ನಲ್ಲಿ 13 ನಂಬರ್ ತೆಗೆದರೆ ಪಾಸ್. ಈ ರೀತಿಯಾದರೆ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಹೋಗಬೇಕು? ಪಾಸಾದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು? ಯಾದಗಿರಿ ಜಿಲ್ಲೆಯಲ್ಲಿ 41%, ಬಳ್ಳಾರಿ 31%, ಬೀದರ್ 21% ಶಿಕ್ಷಕರ ಕೊರತೆ ಇದೆ ಹೀಗೆ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಇದೆ. ಆದರೂ ರಿಸೆಲ್ಟ್ ನೋಡಿದರೆ ದಾಖಲೆ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2 ಸಾವಿರ ಕೋಟಿ ಸಾಲ
ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಏಷ್ಯನ್ ಡೆವಲಪ್ ಬ್ಯಾಂಕಿನಲ್ಲಿ 2 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಆ ಹಣದಲ್ಲೂ ಕಿಕ್ ಬ್ಯಾಕ್ ತೆಗೆದುಕೊಳ್ಳುತ್ತಾರೆ. ಮೌಲ್ಯ ಮಾಪನ ಕೇಂದ್ರಕ್ಕೆ ಶಿಕ್ಷಣ ಸಚಿವರು ಹೋಗಿದ್ದಾರೆ ಅಂದರೆ ಏನು ಅರ್ಥ ? ಇಂಟರ್ನಲ್ 20 ಕ್ಕೆ 20 ಕೊಡಿ ಅಂತ ಇವರೇ ಹೇಳಿದ್ದಾರೆ. ಈ ಮೂಲಕ ಮಗುವಿನ ಓದುವ ಉತ್ಸಾಹವನ್ನೇ ಕಸಿದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಸಿಬ್ಬಂದಿ, ಶಿಕ್ಷಕರ ಕೊರತೆ ನಡುವೆಯೂ ಇಷ್ಟೊಂದು ದೊಡ್ಡ ಮಟ್ಟದ ಫಲಿತಾಂಶ ಬರಲು ಹೇಗೆ ಸಾಧ್ಯವಾಯಿತು? ಮುಂದೆ ಪಿಯುಸಿಯಲ್ಲಿ ಡ್ರಾಪೌಟ್ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಇಂತಹ ಆಯೋಗ್ಯ ಶಿಕ್ಷಣ ಸಚಿವನನ್ನು ಇಟ್ಟುಕೊಂಡು ರಾಜ್ಯದ ಗತಿ ಏನಾಗಬೇಕು.? ಎಂದು ವಾಗ್ದಾಳಿ ನಡೆಸಿದರು.
ಹಿಂದಿಗೆ ಗ್ರೇಡ್ ಕೊಡುವ ವಿಚಾರದಲ್ಲಿ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಿಂದಿ ಭಾಷೆಗೂ ಗ್ರೇಡ್ ಬದಲು ಅಂಕಗಳನ್ನೇ ಕೊಡುವಂತೆ ನ್ಯಾಯಾಲಯ ಛೀಮಾರಿ ಹಾಕಿತು. ಕೋರ್ಟ್ ಛೀಮಾರಿ ಹಾಕಿದ ಎರಡೇ ದಿನಕ್ಕೆ ಫಲಿತಾಂಶ ಪ್ರಕಟ ಆಯ್ತು. ಹಾಗಾದರೆ ಮಾರ್ಕ್ಸ್ ಎರಡೇ ದಿನಗಳಲ್ಲಿ ಹೇಗೆ ಕೊಟ್ಟಿರಿ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫೇಲ್. ಅವನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯನಿಗೆ ಬುದ್ದಿ ಇಲ್ಲ. ಬರೀ ಮಧು ಅಂತ ಹೆಸರಿಟ್ಟಿಕೋ. ಮಧು ಬಂಗಾರಪ್ಪ ಅಂತ ನಿಮ್ಮಪ್ಪನ ಹೆಸರಿಟ್ಟುಕೊಂಡು ಅವರಿಗೆ ಯಾಕೆ ಕೆಟ್ಟ ಹೆಸರು ತರುತ್ತೀಯಾ? ನಿಮ್ಮ ತಂದೆ ಸಿಎಂ ಆಗಿದ್ದಾಗ ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಎಂಎಲ್ಸಿ ಎಚ್ ವಿಶ್ವಾನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.