https://youtube.com/shorts/RcxcteKkGZ8?si=yxDv0iURLfg799X9
newsics.com
ಬೆಂಗಳೂರು: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗುತ್ತಿರುವ ನಾಲ್ಕು ಚೀತಾಗಳು ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವುಗಳನ್ನು ಸ್ವೀಕರಿಸಿ ಬನ್ನೇರಘಟ್ಟ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ತನ್ಮೂಲಕ ಬನ್ನೇರುಘಟ್ಟ ಮೃಗಾಲಯ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೀತಾಗಳಿಗೆ ಆಶ್ರಯ ನೀಡುತ್ತಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆ ಅಡಿ ನಿಯಂತ್ರಕ ಅನುಮತಿ ಮತ್ತು ಪ್ರಾಣಿ ಕ್ವಾರಂಟೈನ್ ಅಧಿಕಾರಿಗಳ ಅನುಮೋದನೆ ನಂತರ ನಾಲ್ಕು ಆಫ್ರಿಕನ್ ಚೀತಾಗಳನ್ನು ಅರಣ್ಯ ಇಲಾಖೆ ತರಿಸಿಕೊಂಡಿದೆ. ಅವುಗಳನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರಿಸಿ ಚೀತಾ ಪ್ರಭೇದವನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ನಿನ್ನೆ ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಚೀತಾಗಳು ಬಂದಿಳಿದಿವೆ. ತಡರಾತ್ರಿ ಬಂದಿದ್ದರೂ, ಅವುಗಳನ್ನು ಬರಮಾಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ವತಃ ಹಾಜರಿದ್ದರು.
ವಿಮಾನದಿಂದ ಇಳಿಯುವ ಕ್ಷಣದಿಂದಲೇ ಚೀತಾಗಳನ್ನು ಅತ್ಯಂತ ಎಚ್ಚರಿಕೆಯಿಂದ, ನಿಯಮದಂತೆ, ಸುರಕ್ಷಿತವಾಗಿ ಮೃಗಾಲಯದ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ದಕ್ಷಿಣ ಆಫ್ರಿಕಾದಂತಹ ದೂರದ ದೇಶದಿಂದ ಬರುವ ಪ್ರಾಣಿಗಳಿಗೆ ಹವಾಮಾನ, ವಾತಾವರಣ, ಆಹಾರ, ನೀರು ಹೀಗೆ ಹಲವು ವಿಷಯಗಳಲ್ಲಿ ಬದಲಾವಣೆಗಳು ಎದುರಾಗುತ್ತವೆ. ಈ ಹವಾಮಾನ ಬದಲಾವಣೆಯಿಂದ ಚೀತಾಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಅವುಗಳ ಆರೋಗ್ಯ ತಪಾಸಣೆ ನಡೆಸಿ ಬನ್ನೇರುಘಟ್ಟದ ಮೃಗಾಲಯದಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಈ ವೇಳೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ನಿಗದಿತ ಆಹಾರ ನೀಡಲಾಗುತ್ತದೆ. ಕ್ವಾರಂಟೈನ್ ಅವಧಿ ಮುಗಿದ ನಂತರ ಚೀತಾಗಳ ಆರೋಗ್ಯ ಆಧರಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ.