newsics.com
ಈ ಗ್ರಾಮದಲ್ಲಿ ಸತ್ತವರ ಶವಗಳನ್ನು ಹೂಳುವುದಿಲ್ಲ, ಸುಡುವುದೂ ಇಲ್ಲ, ಪ್ರಾಣಿಗಳಿಗೂ ಸಹ ನೀಡಲ್ಲ. ಜಗತ್ತಿನಲ್ಲಿ ಬೇರೆಲ್ಲಿಯೂ ಇಂತಹ ಅಂತ್ಯಕ್ರಿಯೆ ಪದ್ಧತಿ ಇಲ್ಲ.
ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ, ಟ್ರುನ್ಯಾನ್ ಎಂಬ ಗ್ರಾಮವಿದೆ. ಇಲ್ಲಿ ವಾಸಿಸುವ ಜನರನ್ನು ‘ಬಾಲಿ ಅಗಾ’ ಎಂದು ಕರೆಯಲಾಗುತ್ತದೆ.
ಬೃಹತ್ ಪರ್ವತಗಳ ಮಧ್ಯೆ ಇರುವ ಸಣ್ಣ ಗ್ರಾಮದಲ್ಲಿ ವಾಸಿಸುವ ಇವರು ಸಂಪ್ರದಾಯ ಆಚರಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅವರಿಗೆ ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳಿವೆ. ಇದರಲ್ಲಿ ಅತ್ಯಂತ ಗಮನಾರ್ಹವಾಗಿರುವುದು ಈ ಜನರ ಅಂತ್ಯಕ್ರಿಯೆ ಪದ್ಧತಿ.
ಪಾರ್ಸಿ ಸಮುದಾಯದಲ್ಲಿ ಮೃತ ದೇಹವನ್ನು ರಣಹದ್ದುಗಳಿಗೆ ತಿನ್ನಲು ಬಿಡಲಾಗುತ್ತದೆ. ಆದರೆ, ಬಾಲಿ ಅಗಾ ಸಮುದಾಯವು ಸತ್ತವರ ಮೃತದೇಹವನ್ನು ಕಾಡಿನಲ್ಲಿ ಕೊಳೆಯಲು ಬಿಡುತ್ತಾರೆ. ಅಷ್ಟೇ ಅಲ್ಲದೆ ಮೃತದೇಹವನ್ನು ರಣಹದ್ದುಗಳು, ಕಾಗೆಗಳು ಇತರ ಪ್ರಾಣಿಪಕ್ಷಿಗಳು ತಿನ್ನದ ಹಾಗೆ ನೋಡಿಕೊಳ್ಳುತ್ತಾರೆ.
ಬಿದಿರಿನ ಪಂಜರಗಳಲ್ಲಿ ದೇಹವನ್ನು ರಕ್ಷಿಸಿ ಕೊಳೆಯಲು ಬಿಡುತ್ತಾರೆ. ಏಕೆಂದರೆ ಬೇರೆ ಜೀವಿಯನ್ನು ತಿನ್ನುವುದು ಸತ್ತವರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.
ವರದಿಯ ಪ್ರಕಾರ, ದೇಹದಿಂದ ಮಾಂಸ ಸಂಪೂರ್ಣವಾಗಿ ಕೊಳೆತು ಹೋದ ನಂತರ, ಬಾಲಿ ಅಗಾ ಸಮುದಾಯ ಜನರು ತಲೆಬುರುಡೆ ಮತ್ತು ಇತರ ಮೂಳೆಗಳನ್ನು ಸಂಗ್ರಹಿಸಿ ಒಂದು ಕಡೆ ಜೋಡಿಸುತ್ತಾರೆ.
ಆತ್ಮಹತ್ಯೆ ಮಾಡಿಕೊಂಡವರಿಗೆ ಅವಕಾಶವಿಲ್ಲ
ಟ್ರುನಿಯನ್ ಗ್ರಾಮದ ಬಳಿ ಈ ರೀತಿಯ ಒಟ್ಟು ಮೂರು ಸ್ಮಶಾನಗಳಿವೆ, ಆದರೆ ಒಂದು ಮಾತ್ರ ಪ್ರವಾಸಿಗರಿಗೆ ಮುಕ್ತವಾಗಿದೆ. ಸಹಜವಾಗಿ ಸಾವನ್ನಪ್ಪಿದವರ ಶವಗಳನ್ನು ಮಾತ್ರ ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ, ಅಪಘಾತ ಅಥವಾ ಆತ್ಮಹತ್ಯೆಯಿಂದ ಸಾವನ್ನಪ್ಪಿದವರನ್ನು ಸಮಾಧಿ ಮಾಡಲು ಅರ್ಹರೆಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಬೇರೆಡೆ ಹೂಳಲಾಗುತ್ತದೆ. ಇದಲ್ಲದೆ, ಇಲ್ಲಿ ಮಕ್ಕಳ ಭೇಟಿಗೆ ಅವಕಾಶವಿಲ್ಲ. ವಿವಾಹಿತರ ಶವಗಳನ್ನು ಮಾತ್ರ ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು, ಸ್ಮಶಾನವು ಶವಗಳಿಂದ ತುಂಬಿದಾಗ, ಹಳೆಯ ಶವದ ಮೂಳೆಗಳನ್ನು ತೆಗೆದು, ನೆಲದ ಮೇಲೆ ಹರಡಲಾಗುತ್ತದೆ. ಶವಗಳನ್ನು ಶುಭ ದಿನಗಳಲ್ಲಿ ಮಾತ್ರ ಇಲ್ಲಿ ಹೂಳಲಾಗುತ್ತದೆ. ಕುಟುಂಬಗಳು ಅಂತ್ಯಕ್ರಿಯೆಗಾಗಿ ಹಣವನ್ನು ಸಂಗ್ರಹಿಸಬೇಕು ಎಂಬ ನಿಯಮ ಕೂಡ ಇದೆ. ಇದಲ್ಲದೆ, ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವು ಶವಗಳನ್ನು ದಿನ ಅಥವಾ ವಾರಗಟ್ಟಲೆ ಮನೆಯಲ್ಲಿಯೇ ಇಡಲಾಗುತ್ತದೆ. ಕೊಳೆಯುವಿಕೆಯನ್ನು ತಡೆಗಟ್ಟಲು, ಅವುಗಳನ್ನು ಫಾರ್ಮಾಲ್ಡಿಹೈಡ್ನಲ್ಲಿ ಸುತ್ತಿಡಲಾಗುತ್ತದೆ.
ಸ್ಥಳೀಯರ ಪ್ರಕಾರ, ಬಾಲಿ ಅಗಾ ಜನರು ಜ್ವಾಲಾಮುಖಿಯನ್ನು ಕೆರಳಿಸುವುದನ್ನು ತಪ್ಪಿಸಲು ಮೃತರ ದೇಹಗಳನ್ನು ಈ ರೀತಿ ಅಂತ್ಯಕ್ರಿಯೆ ಮಾಡುತ್ತಾರಂತೆ. ಈ ಜ್ವಾಲಾಮುಖಿಯನ್ನು ದೇವರು ಎಂದು ಪರಿಗಣಿಸುವ ಇವರು ಸಮಾಧಾನಪಡಿಸಲು, ಸ್ಮಶಾನದಲ್ಲಿ ಹನ್ನೊಂದು ಪಗೋಡಗಳನ್ನು ನಿರ್ಮಿಸಿದ್ದಾರೆ. ಗ್ರಾಮದಲ್ಲಿ ಒಂದು ದೇವಾಲಯವನ್ನು ಸಹ ಕಟ್ಟಿಸಿದ್ದಾರೆ.
ಮೂವರು ಮಕ್ಕಳ ಜೊತೆ ಕೋರ್ಟ್ ಹಾಲ್ನಲ್ಲೇ ಕಣ್ಣೀರಿಟ್ಟ ಶಾಸಕ ವಿನಯ್ ಕುಲಕರ್ಣಿ