newsics.com
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ 1 ರಲ್ಲಿ ಐತಿಹಾಸಿಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ 3 ನಡೆಸುವುದಿಲ್ಲ. ಪರೀಕ್ಷೆ 2 ಮಾತ್ರ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕಳೆದ ಸಲ ಪರೀಕ್ಷೆ 2ರಲ್ಲಿ ಫಲಿತಾಂಶ ಶೇಕಡ 8 ರಷ್ಟು ಉತ್ತಮವಾಗಿತ್ತು. ಪರೀಕ್ಷೆ 3ರಲ್ಲಿ ಶೇಕಡ ಒಂದಕ್ಕಿಂತ ಸ್ವಲ್ಪ ಹೆಚ್ಚು ಜನ ಪಾಸ್ ಆಗಿದ್ದಾರೆ. ಮೂರನೇ ಪರೀಕ್ಷೆ ಫಲಿತಾಂಶ ಬರುವ ವೇಳೆಗೆ ಸಿಇಟಿ ಫಲಿತಾಂಶ ಬಂದು ಕೌನ್ಸೆಲಿಂಗ್ ಕೂಡ ಮುಗಿದಿರುತ್ತದೆ. ಕಾಲೇಜುಗಳ ದಾಖಲಾತಿಯು ಪೂರ್ಣವಾಗಿರುತ್ತದೆ. ಹೀಗಾಗಿ ಪರೀಕ್ಷೆ 3 ನಡೆಸುವ ಅಗತ್ಯ ಕಾಣುತ್ತಿಲ್ಲ. ಹೀಗಾಗಿ ಕೈ ಬಿಡಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಮೂರನೇ ಪರೀಕ್ಷೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿಲ್ಲ. ಇದು ಈ ವರ್ಷದ ನಿರ್ಧಾರ ಮಾತ್ರ. ಮುಂದೆ ಅಗತ್ಯವೆನಿಸಿದರೆ ಮತ್ತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ
ದ್ವಿತೀಯ ಪಿಯುಸಿ ಪರೀಕ್ಷೆ 2 ರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಏಪ್ರಿಲ್ 30 ರಿಂದ ಮೇ 13 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಬಹುತೇಕ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಗೀತ ಮತ್ತು ಎನ್.ಎಸ್.ಕ್ಯೂ.ಎಫ್. ವಿಷಯಗಳು ಮಧ್ಯಾಹ್ನ 2ರಿಂದ 4.15 ರವರೆಗೆ ನಡೆಯಲಿದೆ. ಪರೀಕ್ಷೆ 2ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿದೆ. ಪರೀಕ್ಷಾ ಮಂಡಳಿಯ ವೆಬ್ಸೈಟ್ kseab.karnataka.gov.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ಇರುವುದಿಲ್ಲ.
ಏಪ್ರಿಲ್ 30 ಕನ್ನಡ, ಅರೇಬಿಕ್
ಮೇ 2 ಕೈ ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ
ಮೇ 4 ಇಂಗ್ಲಿಷ್
ಮೇ 5 ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ
ಮೇ 6 ಅರ್ಥಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ
ಮೇ 7 ಇತಿಹಾಸ, ಗಣಿತ, ಗೃಹ ವಿಜ್ಞಾನ
ಮೇ 8 ರಾಜ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 9 ಹಿಂದಿ, ಸಮಾಜಶಾಸ್ತ್ರ
ಮೇ 12 ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲಗಣಿತ
ಮೇ 13 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದೂಸ್ತಾನಿ ಸಂಗೀತ.