https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ಚುನಾವಣೆಗೆ ಹಣವನ್ನು ನೀರಿನಂತೆ ಸುರಿಸದಿದ್ದರೆ ಗೆಲ್ಲಲೂ ಖಂಡಿತ ಸಾಧ್ಯವಿಲ್ಲ ಎನ್ನುವುದನ್ನು ತಳ್ಳಿ ಹಾಕುವ ಪರಿಸ್ಥಿತಿಯಲ್ಲಿ ನಾವಿಲ್ಲ. ಆದರೆ ಈ ಭಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಯೊಬ್ಬರ ಅಕೌಂಟ್ನಲ್ಲಿ ಇರುವುದು ಕೇವಲ 44 ರೂಪಾಯಿ ಎಂದರೆ ನೀವು ನಂಬಲೇ ಬೇಕು.
ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೋಟಿಗಟ್ಟಲೆ ಆಸ್ತಿ ವಿವರ ಇಲ್ಲ. ಕೈಯಲ್ಲಿರುವುದು ಬರೀ 84 ರೂಪಾಯಿ. ಸ್ವಂತ ಭೂಮಿ, ವಾಹನ, ಚಿನ್ನ, ಆದಾಯ ಯಾವುದೂ ಇಲ್ಲ. ಎಟುಮಾನೂರು ಕ್ಷೇತ್ರದ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಆಶ್ನಾ ಥಂಪಿ, ಹಣದ ಹೊಳೆ ಹರಿಸುವ ಚುನಾವಣಾ ಅಖಾಡದಲ್ಲಿ ಎಲ್ಲರಿಗಿಂತ ಭಿನ್ನವಾಗಿದ್ದಾರೆ.ಈ ವಿಧಾನಸಭಾ ಚುನಾವಣೆಯಲ್ಲಿ 26 ವರ್ಷದ ಆಶ್ನಾ, ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿ.
ಅಶ್ನಾ ಥಂಪಿ ಸಲ್ಲಿಸಿರುವ ಅಫಿಡಿವಿಟ್ನಲ್ಲಿ ಅವರ ಬಳಿ ಯಾವುದೇ ಮನೆ, ಭೂಮಿ, ವಾಹನ, ಆಭರಣ ಮತ್ತು ನಿವೇಶನಗಳು ಇಲ್ಲ ಎಂದು ತಿಳಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕೋಟಿ-ಕೋಟಿ ಆಸ್ತಿಯನ್ನು ತೋರಿಸುವ ರಾಜಕಾರಣಿಗಳ ಮಧ್ಯೆ ಈ ಅಶ್ನಾ ಥಂಪಿ ಎಂಬ ಅಭ್ಯರ್ಥಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.
ಆಸ್ತಿ ಸಂಪಾದನೆಯಲ್ಲಿ ಹಿಂದೆ ಬಿದ್ದಿದ್ದರೂ ಹೋರಾಟದಲ್ಲಿ ಈ ಅಶ್ನಾ ಥಂಪಿ ಮುನ್ನಲೆಯ ನಾಯಕಿ ಎಂದರೆ ತಪ್ಪಾಗದು. ಸಾಹಿತ್ಯದಲ್ಲಿ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಡಿಪ್ಲೊಮಾ ಪಡೆದಿರುವ ಇಕೆ, ವಿದ್ಯಾರ್ಥಿ ಜೀವನದಲ್ಲಿದಾಗಲೇ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ಸೇರುವ ಮೂಲಕ ಅನೇಕ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದರು.
ಹೋರಾಟದ ಕಣದಲ್ಲಿ ಸದಾ ಸಕ್ರಿಯರಾಗಿರುವ ಆಶ್ನಾಗೆ, ಜನಸೇವೆ ಮಾಡಲು ಹಣಕ್ಕಿಂತ ಹೆಚ್ಚಾಗಿ ಜನರಿಗೆ ಸಹಾಯ ಮಾಡುವ ಮನಸ್ಸಿರಬೇಕು ಎಂಬ ಆತ್ಮವಿಶ್ವಾಸವಿದೆ. ಈ ಹಿಂದೆ ಮಹಾರಾಜಾಸ್ ಕಾಲೇಜಿನಲ್ಲಿ ಎಐಡಿಎಸ್ಒ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದು ಅವರ ಚುನಾವಣಾ ಅನುಭವ. ಜರ್ನಲಿಸಂನಲ್ಲಿ ಪಿಜಿ ಡಿಪ್ಲೊಮಾ ಮಾಡಿರುವ ಆಶ್ನಾ, ಪಕ್ಷದ ಮೀಡಿಯಾ ಕೋಆರ್ಡಿನೇಟರ್, ಜಿಲ್ಲಾ ಸಮಿತಿ ಸದಸ್ಯೆ, ತಿರುವಾರ್ಪ್ ಸ್ಥಳೀಯ ಸಮಿತಿ ಸದಸ್ಯೆ ಮತ್ತು ಎಐಡಿಎಸ್ಒ ರಾಜ್ಯ ಸಚಿವಾಲಯದ ಸದಸ್ಯೆಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ತಿರುವನಂತಪುರದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಕೂದಲು ಕತ್ತರಿಸಿ ಪ್ರತಿಭಟಿಸಿದಾಗ, ಅವರಿಗೆ ಬೆಂಬಲ ಸೂಚಿಸಿ ಆಶ್ನಾ ಕೂಡಾ ತಮ್ಮ ಕೂದಲನ್ನು ಕತ್ತರಿಸಿದ್ದು ಸುದ್ದಿಯಾಗಿತ್ತು.
ನಮ್ಮ ಪಕ್ಷ ಜನರಿಂದಲೇ ಹಣ ಪಡೆದು ಜನರಿಗಾಗಿಯೇ ಕೆಲಸ ಮಾಡುವುದು. ನಾವು ಯಾವಾಗಲೂ ಬಾಕ್ಸ್ ಹಿಡಿದು ದೇಣಿಗೆ ಸಂಗ್ರಹಿಸುತ್ತೇವೆ. ಬೀದಿಗಳಲ್ಲಿ ಬಕೆಟ್ ಹಿಡಿದು ಫಂಡ್ ಕಲೆಕ್ಟ್ ಮಾಡಿಯೇ ನಾವು ಹಲವು ಹೋರಾಟಗಳನ್ನು ನಡೆಸಿ ಗೆದ್ದಿದ್ದೇವೆ. ಈ ಬಾರಿಯೂ ಕೊಟ್ಟಾಯಂ ಮೆಡಿಕಲ್ ಕಾಲೇಜಿನಂತಹ ಸ್ಥಳಗಳಲ್ಲಿ ಫಂಡ್ ಸಂಗ್ರಹಿಸಿ ಪ್ರಚಾರದ ಖರ್ಚು ನಿಭಾಯಿಸುತ್ತಿದ್ದೇವೆ. ನಮ್ಮ ರಾಜಕೀಯವನ್ನು ಅರ್ಥಮಾಡಿಕೊಂಡಿರುವ ಸ್ನೇಹಿತರು ಕೂಡ ದೇಣಿಗೆ ನೀಡುತ್ತಿದ್ದಾರೆ.