newsics.com| ನ್ಯೂಸಿಕ್ಸ್
ಬೆಂಗಳೂರು: ರಾಜ್ಯದಲ್ಲಿ ಬದಲಾಗುತ್ತಿರುವ ಹವಾಮಾನದ ಹಿನ್ನೆಲೆಯಲ್ಲಿ ಗುರು ಮಾನ ಜ್ವರದ (ಸಾಂಕ್ರಾಮಿಕ ಇನ್ಫ್ಲುಯೆಂಜಾ) ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಈ ಜ್ವರವು ಅತ್ಯಂತ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಕೆಲವೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಜ್ವರ ಪೀಡಿತರಲ್ಲಿ ಜ್ವರ, ಕೆಮ್ಮು, ಗಂಟಲು ನೋವು ಅಥವಾ ಗಂಟಲಿನಲ್ಲಿ ಊತ ಕಾಣಿಸಿಕೊಳ್ಳುವುದರ ಜೊತೆಗೆ ಮೈ-ಕೈ ನೋವು ಮತ್ತು ಉಸಿರಾಟಕ್ಕೆ ತೊಂದರೆಯಾಗುವಂತಹ ಪ್ರಮುಖ ಲಕ್ಷಣಗಳು ಗೋಚರಿಸುತ್ತವೆ.
ಜ್ವರ ಬಾಧಿತ ವ್ಯಕ್ತಿಗಳು ಬಹಿರಂಗವಾಗಿ ಕೆಮ್ಮಿದಾಗ ಅಥವಾ ಸೀನಿದಾಗ ಸಮೀಪ ಇರುವವರು ಉಸಿರಾಡುವುದರಿಂದ ಹಾಗೂ ವೈರಸ್ ಸೋಂಕಿತರ ಮೇಲ್ಮೈಗಳನ್ನು ಸ್ಪರ್ಶಿಸಿ ಅದೇ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ ಈ ರೋಗವು ಅತ್ಯಂತ ಸುಲಭವಾಗಿ ಹರಡುತ್ತದೆ. ಈ ನಿಟ್ಟಿನಲ್ಲಿ ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರದಿಂದ ಬಾಯಿ ಹಾಗೂ ಮೂಗನ್ನು ಕಡ್ಡಾಯವಾಗಿ ಮುಚ್ಚಿಕೊಳ್ಳಬೇಕು ಮತ್ತು ಕೈಗಳನ್ನು ನಿಯಮಿತವಾಗಿ ಸೋಪು ಹಾಗೂ ಶುದ್ಧ ನೀರಿನಿಂದ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸಲಹೆ ನೀಡಿದೆ.
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಹೆಚ್ಚಿನ ಪ್ರಮಾಣದ ದ್ರವಾಹಾರ ಹಾಗೂ ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಸೂಕ್ತ ಅಂತರವನ್ನು ಕಾಯ್ದುಕೊಳ್ಳಬೇಕು. ರೋಗ ಲಕ್ಷಣವಿದ್ದಲ್ಲಿ ಜನದಟ್ಟಣೆ ಇರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಆದಷ್ಟು ಕಡಿಮೆ ಮಾಡಬೇಕು, ಇತರರು ಬಳಸಿದ ಬಟ್ಟೆ ಅಥವಾ ಕರವಸ್ತ್ರಗಳನ್ನು ಉಪಯೋಗಿಸಬಾರದು. ವೈದ್ಯರ ಸೂಕ್ತ ಸಲಹೆ ಅಥವಾ ಚೀಟಿ ಇಲ್ಲದೆ ಸ್ವಯಂ ಇಚ್ಛೆಯಂತೆ ಮಾತ್ರೆಗಳನ್ನು ಖರೀದಿಸಿ ಸೇವಿಸಬಾರದು ಎಂದು ಸೂಚಿಸಿದೆ.
KSRTC ಬಸ್ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ