newsics.com
ಮೊದಲಿನಿಂದಲೂ ಮಾಧ್ಯಮದವರ ಜತೆ ಲವ್ ಆಂಡ್ ಹೇಟ್ ಸಂಬಂಧ ಹೊಂದಿರುವವರು ದರ್ಶನ್. ಇಬ್ಬರಲ್ಲಿ ಯಾರು ಸರಿ.. ಯಾರು ತಪ್ಪು.. ಎಂದು ಖಡಾಖಂಡಿತವಾಗಿ ನಿರ್ಧಾರ ಮಾಡಲು ಸಾಧ್ಯ ಇಲ್ಲವಾದರೂ ಕರುನಾಡಿನಲ್ಲಿ ದರ್ಶನ್ ಅತ್ಯುತ್ತಮ ಟಿ.ಆರ್.ಪಿ ಮೆಟೀರಿಯಲ್. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಖುದ್ದು ದರ್ಶನ್ ಅವರಿಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು.
ಇಂಥಾ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕುಳಿತುಕೊಂಡೆ ಈಗ ಇನ್ನೊಮ್ಮೆ ಮಾಧ್ಯಮದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಧೋ ಎಂದು ಸುರಿಯುವ ಮಳೆಗಿಂತ ಮಾಧ್ಯಮಗಳ ಮೂಲಕ ಬ್ರೇಕಿಂಗ್ ನ್ಯೂಸ್ಗಳು ಜನರ ಲಿವಿಂಗ್ ರೂಮ್ ತಲುಪುತ್ತಿವೆ.
ಸುದ್ದಿಯನ್ನು ಈಗ ಯಾರು ವರದಿಯನ್ನು ಮಾಡುತ್ತಿಲ್ಲ. ಬದಲಿಗೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಮುನ್ನ ಮೀಡಿಯಾ ಟ್ರಯಲ್ ನಡೆಯುತ್ತೆ. ಸದ್ಯ ದರ್ಶನ್ ಕೆರಳಿದ್ದು ಇದೇ ವಿಚಾರಕ್ಕೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲಿನ ತಮ್ಮ ಅಸಮಾಧಾನವನ್ನು ಕೂಡ ಇದೇ ಸಮಯದಲ್ಲಿ ಹೊರ ಹಾಕಿದ್ಧಾರೆ.
ಈ ಕುರಿತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಸುದ್ದಿ ವಾಹಿನಿಗಳು ಉಲ್ಲಂಘಿಸಿವೆ ಎಂದಿದ್ದಾರೆ. ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಕೂಡ ಮಾಡಿಕೊಂಡಿರುವ ದರ್ಶನ್ ತಮ್ಮ ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನೆ ಮಾಡಿದ್ದಾರೆ.
2026ರ ಜ.16ರಂದು ಕಾರ್ಯಕ್ರಮ ಸಂಹಿತೆ ನಿಯಮ 6(ಡಿ) (ಎಫ್) & (i) ಉಲ್ಲಂಘಿಸಿರುವ 1000 ಯೂಟ್ಯೂಬ್ ಲಿಂಕ್ಗಳನ್ನು ಕೇಂದ್ರ ಮಾಹಿತಿ & ಪ್ರಸಾರ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ತಮ್ಮ ಅರ್ಜಿಯ ಮೂಲಕ ಹೈಕೋರ್ಟ್ನಲ್ಲಿ ಕೋರಿದ್ದಾರೆ.
ಗ್ರಾಫಿಕ್ಸ್ ಮತ್ತು ಎಐ ತಂತ್ರಜ್ಞಾನದ ಸಹಾಯದ ಮೂಲಕ ಸುದ್ದಿ ವಾಹಿನಿಗಳು, ನ್ಯಾಯಾಲಯದ ಪ್ರಕ್ರಿಯೆ ಮತ್ತು ಅಪರಾಧದ ದೃಶ್ಯಗಳನ್ನು ಮರುಸೃಷ್ಟಿ ಮಾಡುತ್ತಿವೆ, ವಿಚಾರಣಾಧೀನ ನ್ಯಾಯಾಲಯವು ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯವು ಹೊರಡಿಸಿರುವ ಪ್ರತಿಬಂಧಕಾದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದರ್ಶನ್ ದೂರಿದ್ದಾರೆ. ಈ ಮೂಲಕ ನ್ಯಾಯಾಂಗ ನಿಂದನೆಯಷ್ಟೇ ಅಲ್ಲದೆ, ಆರೋಪಿಯ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕೂಡ ಕಸಿದುಕೊಳ್ಳಲಾಗುತ್ತಿದೆ ಎಂಬ ವಾದ ಮಾಡಿದ್ದಾರೆ.
ಸಂವಿಧಾನದ 14 ಮತ್ತು 21ನೇ ವಿಧಿ ಅಡಿಯ ಹಕ್ಕುಗಳನ್ನು ಕೂಡ ಸುದ್ದಿ ವಾಹಿನಿಗಳು ಉಲ್ಲಂಘನೆ ಮಾಡಿವೆ ಎಂದು ಹೇಳಿರುವ ದರ್ಶನ್, ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ ಎಂದು ಹೇಳಿದ್ಧಾರೆ. ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
1994ರ ಕೇಬಲ್ ಟೆಲಿವಿಷನ್ ನೆಟವರ್ಕ್ಸ್ ನಿಯಮ ಉಲ್ಲಂಘನೆ ಆದರೆ ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಆದರೆ, 1000 ಯೂಟ್ಯೂಬ್ ಲಿಂಕ್ಗಳನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದ್ದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ದರ್ಶನ್, ಈ ಎಲ್ಲಾ ಆಕ್ಷೇಪಾರ್ಹವಾದ ಲಿಂಕ್ಗಳನ್ನು ತೆರವು ಮಾಡಲು ಯೂಟ್ಯೂಬ್ ಮತ್ತು ಫೇಸ್ಬುಕ್/ಮೆಟಾಗೆ ನಿರ್ದೇಶಿಸುವಂತೆ ಕೋರಲಾಗಿದೆ. ಅದಾಗ್ಯೂ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ಧಾರೆ. ಮಾಧ್ಯಮಗಳು ನ್ಯಾಯಯುತ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮ ವಿಚಾರಣೆ ನಡೆಸುವ ಮೂಲಕ ದರ್ಶನ್ ಅವರಿಗೆ ಹಾನಿ ಉಂಟು ಮಾಡುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆಕ್ಷೇಪ ವ್ಯಕ್ತಪಡಿಸಲಾಗಿದೆ.
ದರ್ಶನ್ ಸಲ್ಲಿಸಿದ ಈ ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠದ ಮುಂದೆ ಬಂದಿದ್ದು, ಈ ಬಗ್ಗೆ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿದೆ. ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್ ಮಾಧ್ಯಮಗಳ ವಿರುದ್ದ ಯಾವ ಕ್ರಮ ಕೈಗೊಳ್ಳಬಹುದು ಎಂದು ಸೋಮವಾರದೊಳಗೆ ತಿಳಿಸಲಾಗುವುದು ಎಂದು ಹೇಳಿದ್ದು, ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ಮದುವೆಗೂ ಮುನ್ನ ತೂಕ ಇಳಿಸಲು ಮೌಂಜಾರೋ ಬ್ರೈಡ್ಸ್ ಇಂಜೆಕ್ಷನ್ ಮೊರೆ ಹೋದ ವಧುಗಳು!
ಮೂರನೇ ಮಗುವೂ ಹೆಣ್ಣಾಗುತ್ತೆ ಎಂದು ಗರ್ಭಿಣಿ ಹೆಂಡತಿ, ಮಕ್ಕಳನ್ನು ನೀರಲ್ಲಿ ಮುಳುಗಿಸಿ ಕೊಂದ ಪಾಪಿ