https://youtube.com/shorts/JFDfzeRUAUw?si=UPiQjhCFAIkLXEhb
newsics.com
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಕೇವಲ ಎರಡು ವರ್ಷಗಳ ಕಾಲಾವಕಾಶದೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಮತ್ತು ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಮಾತ್ರ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿರುತ್ತದೆ. ಒಂದು ನಿರ್ದಿಷ್ಟ ವರ್ಷದಲ್ಲಿ ನಡೆಯುವ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳು ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅಥವಾ ಫಲಿತಾಂಶ ಸುಧಾರಣೆಗೆ ಬಯಸಿದಲ್ಲಿ ಕಡ್ಡಾಯವಾಗಿ ಮುಂದಿನ ವರ್ಷವೂ ನಡೆಯುವ ಮೂರು ವಾರ್ಷಿಕ ಪರೀಕ್ಷೆಗಳಲ್ಲಿ ಅದನ್ನು ಪೂರ್ಣಗೊಳಿಸಬೇಕಿದೆ. ಎರಡು ವರ್ಷ ಕಾಲಾವಧಿ ಮೀರಿದ ನಂತರ ಹೆಚ್ಚುವರಿ ಅವಕಾಶ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ರೆಗ್ಯುಲರ್, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. 2024- 25 ನೇ ಸಾಲಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊಸ ನಿಯಮದ ಅನ್ವಯ 2024ರ ದ್ವಿತೀಯ ಪಿಯುಸಿ ಪರೀಕ್ಷೆ ಒಂದು, ಎರಡು ಮತ್ತು ಮೂರಕ್ಕೆ ನೋಂದಾಯಿಸಿಕೊಂಡ ರೆಗ್ಯುಲರ್, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮುಂದಿನ ವರ್ಷಗಳಿಗೂ ಫಲಿತಾಂಶ ಸುಧಾರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು, ಕಾಲಮಿತಿ ಎಷ್ಟು ಎನ್ನುವ ಬಗ್ಗೆ ನಿಯಮಗಳು ಇರಲಿಲ್ಲ. ಹೊಸ ನಿಯಮದ ಪ್ರಕಾರ ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳಂತೆ ಎರಡು ವರ್ಷದಲ್ಲಿ ಆರು ಬಾರಿ ಪರೀಕ್ಷೆ ಬರೆಯಬಹುದು. ಆದರೆ ನೋಂದಣಿ ಮಾಡಿಸಿಕೊಂಡ ವರ್ಷ ಮತ್ತು ಅದರ ವರ್ಷದೊಳಗೆ ಆರು ಪರೀಕ್ಷೆ ಬರೆಯಬೇಕು. ನಂತರ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.