Subscribe ನ್ಯೂಸಿಕ್ಸ್ ಕನ್ನಡ
newsics.com
ಕೇರಳದ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಈ ನಿಟ್ಟಿನಲ್ಲಿ ಅಧಿಕೃತವಾಗಿ ನಾಮಾಕರಣ ಮಾಡುವ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಕೇರಳದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.
ನಿರ್ಣಯ ಮಂಡಿಸಿದ್ದ ಪಿಣರಾಯ್
ಕೇರಳದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ವಿಧಾನಸಭೆಯಲ್ಲಿ ಈ ನಿರ್ಣಯ ಅಂಗೀಕಾರಕೊಂಡಿತ್ತು. ಬಳಿಕ ಕೇಂದ್ರದ ಒಪ್ಪಿಗೆಗೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಹೀಗಾಗಿ ಕೇರಳಿಗರ ಕನಸು ನನಸಾಗಿದೆ.
ಕೇರಳದ ಜನರು ಮಾತನಾಡುವ ಮಲಯಾಳಂ ಭಾಷೆಯಲ್ಲಿ ಕೇರಳದ ಹೆಸರನ್ನು ಕೇರಳಂ ಎಂದೇ ಕರೆಯಲಾಗುತ್ತಿತ್ತು. ಆದರೆ ಸಂವಿಧಾನ ಅನುಸೂಚಿಯಲ್ಲಿ ಮತ್ತು ಇಂಗ್ಲಿಷ್ ನಲ್ಲಿ ಕೇರಳ ಎಂದು ದಾಖಲಾಗಿದೆ. ಹಾಗಾಗಿ ಇದನ್ನು ಕೇರಳಂ ಎಂದು ಬದಲಾಯಿಸಬೇಕು ಎಂಬುವುದು ಮಲಯಾಳಿಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳದ ವಿಧಾನಸಭೆಯಲ್ಲಿ ಮಂಡನೆಯಾಗಿದ್ದ ನಿರ್ಣಯ ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಂಡಿತ್ತು. ವಿಪಕ್ಷಗಳು ಕೂಡಾ ಬೆಂಬಲ ಸೂಚಿಸಿದ್ದವು
ಚುನಾವಣೆಯ ಸಂದರ್ಭದಲ್ಲೇ ಕೇಂದ್ರದ ನಡೆ
ಈ ನಡುವೆ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಬಿಜೆಪಿ ಕೂಡಾ ತಂತ್ರಗಾರಿಕೆ ನಡೆಸುತ್ತಿದೆ. ಕೇರಳದಲ್ಲಿ ಬಿಜೆಪಿ ಯಾವುದೇ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಕೇರಳದಲ್ಲಿ ತನ್ನ ಶಕ್ತಿ ವೃದ್ದಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
ಇತ್ತೀಚೆಗೆ ಕೇರಳದ ಮಾಜಿ ಸಿಎಂ ವಿಎಸ್ ಅಚ್ಯುತ್ತಾನಂದನ್ ಅವರಿಗೆ ಪದ್ಮವಿಭೂಷನ ಪ್ರಶಸ್ತಿಯನ್ನು ಘೋಷಿಸಿತ್ತು. ಇದು ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಕೇರಳದ ಚುನಾವಣೆ ದೃಷ್ಟಿಯಿಂದ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ ನೀಡಿದೆ.