Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗದಗ: ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈಗ ಗ್ರಾಮವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾಪವಿಲ್ಲ. ನಡೆಯುತ್ತಿರುವ ಉತ್ಖನನದ ವೇಳೆ ಮಹತ್ವದ ಅವಶೇಷ ಸಿಕ್ಕರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅವರು ತಿಳಿಸಿದ್ದಾರೆ. ಈ ಮೂಲಕ ಗ್ರಾಮವನ್ನು ಸ್ಥಳಾಂತರಿಸುವ ಮುನ್ಸೂಚನೆ ನೀಡಿದ್ದಾರೆ.
ಲಕ್ಕುಂಡಿಯ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಉತ್ಖನನಕ್ಕೆ ಬಳಸುವ ಗಾರೆ, ಪಿಕಾಸಿ, ಬುಟ್ಟಿ ಹಾಗೂ ದಾರ ಸೇರಿದಂತೆ ವಿವಿಧ ಪರಿಕರಗಳಿಗೆ ಕುಂಕುಮ, ವಿಭೂತಿ ಹಚ್ಚಿ, ಹೂವು ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 11ಕ್ಕೆ ಸರಿಯಾಗಿ ಜಿಲ್ಲಾಧಿಕಾರಿಗಳು ಉತ್ಖನನ ಕಾರ್ಯವನ್ನು ಆರಂಭಿಸಿದರು.
ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಬಂಗಾರದ ಆಭರಣ (ನಿಧಿ) ಸಿಕ್ಕ ಬೆನ್ನಲ್ಲೇ ಉತ್ಖನನ ನಡೆಯುತ್ತಿರುವುದು ಕಾಕತಾಳೀಯವಾದರೂ ಸರ್ಕಾರವು ಪೂರ್ವ ನಿಗದಿತ ಯೋಜನೆಯಂತೆ ಶೋಧ ಕಾರ್ಯ ಕೈಗೊಂಡಿದೆ. ನಿಧಿ ಸಿಕ್ಕ ಜಾಗದಿಂದ ಸುಮಾರು 250 ಮೀಟರ್ ಅಂತರದಲ್ಲಿ ಶೋಧ ನಡೆಯುತ್ತಿರುವುದು ವಿಶೇಷವಾಗಿದೆ.
ಪುರಾತತ್ವ ಇಲಾಖೆಯ ಅಧಿಕಾರಿಗಳು ಉತ್ಖನನದಲ್ಲಿ ತೊಡಗಿರುವ ಸುಮಾರು 50 ಮಂದಿ ಕಾರ್ಮಿಕರಿಗೆ ವಿಶೇಷ ತರಬೇತಿ ನೀಡಿದ್ದು, ಪ್ರಾಚೀನ ವಸ್ತುಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಅತ್ಯಂತ ನಾಜೂಕಿನಿಂದ ಮಣ್ಣು ತೆಗೆಯುವ ಬಗ್ಗೆ ಅಗತ್ಯ ತರಬೇತಿ ನೀಡಿದ್ದಾರೆ.
ಇನ್ನು ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿರುವ ಭಾಗಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ವೀಡಿಯೊ, ಫೋಟೋಗ್ರಫಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಈ ಆದೇಶ ಹೊರಡಿಸಿದ್ದಾರೆ. ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಉತ್ಖನನ ಜಾಗವನ್ನ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಉತ್ಖನನ ಕೆಲಸಕ್ಕೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ
https://www.newsics.com/2026/01/17/hindu-activist-puneeth-kerehalli-taken-into-custody-by-police/