Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರಿನ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯವು ದೇಗುಲ ಆವರಣದಲ್ಲಿ ವಿವಾಹ ಕಾರ್ಯಕ್ರಮಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಹಲವು ವರ್ಷಗಳಿಂದ ಮದುವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿತ್ತು. ಪ್ರಸ್ತುತ ಆ ದೇವಾಲಯದಲ್ಲಿ ಮದುವೆ ಕಾರ್ಯಕ್ರಮವನ್ನು ನಡೆಸುವುದನ್ನು ನಿಲ್ಲಿಸಲಾಗಿದೆ. ಇದೀಗ ಈ ನಿರ್ಧಾರದ ಹಿಂದಿನ ಕಾರಣ ಬಯಲಾಗಿದೆ.
ತಮ್ಮ ಮದುವೆ ನಡೆಸಲು ದೇವಾಲಯ ನಿರಾಕರಿಸಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ದೂರಿನ ಬೆನ್ನಲ್ಲೇ CMO ಸ್ಪಷ್ಟನೆ ಕೇಳಿದಾಗ, ದಾಂಪತ್ಯ ಜೀವನ ವಿಫಲವಾದರೆ ನ್ಯಾಯಾಲಯ ಅಲೆಯುವುದು ಬೇಡ ಎಂಬುದು ತಮ್ಮ ನಿರ್ಧಾರದ ಹಿಂದಿನ ಮುಖ್ಯ ಕಾರಣವೆಂದು ಅರ್ಚಕರು ತಿಳಿಸಿದರು.
ಶತಮಾನಗಳಷ್ಟು ಹಳೆಯ ಈ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯವು ಬೆಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಮದುವೆ ಕಾರ್ಯಗಳಿಗೆ ಹಿಂದಿನಿಂದಲೂ ಜನಪ್ರಿಯತೆ ಪಡೆದುಕೊಂಡಿತ್ತು.
ಆದರೆ, ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿ ಮದುವೆ ಸಂಬಂಧಿಸಿ ಹಲವು ಸಮಸ್ಯೆಗಳನ್ನು ಎದುರಿಸಿದೆ. ಅಲ್ಲದೇ ದೇಗುಲ ಆವರಣದಲ್ಲಿ ವಿವಾಹವಾದ ದಂಪತಿಗಳು ನಂತರ ವಿಚ್ಛೇದನ ಪರಿಶೀಲನೆಗಾಗಿ ದೇವಾಲಯವನ್ನು ಸಂಪರ್ಕಿಸುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ಕಾರಣದಿಂದ ದೇವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ನ್ಯಾಯಾಲಯಗಳು ಹೆಚ್ಚಾಗಿ ವಿಚ್ಛೇದನ ಕಲಾಪದ ವೇಳೆ ದೇವಾಲಯದ ಅರ್ಚಕರನ್ನು ಹಾಜರಾಗಲು ಆದೇಶಿಸುತ್ತಿದ್ದವು. ಇದು ದೇವಾಲಯದ ಕಾರ್ಯನಿರ್ವಹಣೆ ಮತ್ತು ಅರ್ಚಕರಿಗೆ ಹೆಚ್ಚಿನ ತೊಂದರೆ ನೀಡುತ್ತಿತ್ತು ಎಂದು ಹೇಳಲಾಗಿದೆ.
ಅನೇಕ ಜೋಡಿಗಳು ಮನೆಯಿಂದ ಓಡಿಬಂದು ನಕಲಿ ದಾಖಲೆ ನೀಡಿ ವಿವಾಹವಾಗುತ್ತಾರೆ. ಕೆಲವೇ ದಿನಗಳಲ್ಲಿ ಅವರ ಪೋಷಕರು ಬಂದು, ಕೆಲವು ಸಂದರ್ಭಗಳಲ್ಲಿ, ದೂರನ್ನೂ ದಾಖಲಿಸುತ್ತಾರೆ. ನಂತರ ದೇವಾಲಯದ ಹೆಸರನ್ನೂ ನೀಡುತ್ತಾರೆ ಎಂದು ವಿವರಿಸಿದರು.
ವಾಸ್ತವವಾಗಿ, ದೇವಾಲಯ ಸುಮಾರು ಆರು-ಏಳು ವರ್ಷಗಳ ಹಿಂದೆಯೇ ಮದುವೆ ನಿಲ್ಲಿಸಿದೆ. ಅದಕ್ಕೂ ಮುನ್ನ ಇಲ್ಲಿ ವಾರ್ಷಿಕವಾಗಿ 100-150 ವಿವಾಹಗಳು ನಡೆಯುತ್ತಿದ್ದವು. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಾಲಯದ ಘನತೆಗೆ “ಅಹಿತಕರ ಘಟನೆಗಳು” ಧಕ್ಕೆ ತರದಂತೆ ತಡೆಯುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿತ್ತು.
ವಿವಾಹಗಳು ಸ್ಥಗಿತಗೊಂಡಿದ್ದರೂ, ದೇವಾಲಯದಲ್ಲಿ ಇಂದಿಗೂ ಇತರ ಪೂಜೆ ಮತ್ತು ಧಾರ್ಮಿಕ ಸಮಾರಂಭಗಳು ಜಾರಿಯಲ್ಲಿವೆ. ಭವಿಷ್ಯದಲ್ಲಿ ಈ ನೀತಿಯನ್ನು ಮರುಪರಿಶೀಲಿಸಬಹುದು ಎಂದಿದ್ದರೂ, ಸದ್ಯಕ್ಕೆ ಯಾವುದೇ ವಿವಾಹ ಸಮಾರಂಭ ನಡೆಯುವುದಿಲ್ಲವೆಂದು ಸ್ಪಷ್ಟನೆ ನೀಡಲಾಗಿದೆ.