Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube
newsics.com
ಧಾರವಾಡ: ಆರು ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಉಸಿರಾಡಿದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.
ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಅಂತ್ಯಕ್ರಿಯೆ ವೇಳೆ ಕಣ್ಬಿಟ್ಟು ಅಚ್ಚರಿ ಹುಟ್ಟಿಸಿರುವ ವ್ಯಕ್ತಿ.
ನಾರಾಯಣ ಹೊನ್ನಲ್ ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ನಾರಾಯಣ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಗದಗ- ಬೆಟಗೇರಿಯಲ್ಲಿ ಶ್ರದ್ಧಾಂಜಲಿಯ ಬ್ಯಾನರ್ ಕೂಡ ಕಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಬಂಧು ಬಾಂಧವರೂ ಬಂದಿದ್ದರು.
ನಾರಾಯಣ ಅವರ ದೇಹವನ್ನು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮನೆಗೆ ತಂದಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆ ನಾರಾಯಣ ಅವರು ಮತ್ತೆ ಉಸಿರಾಡಿ, ಕಣ್ಣುಬಿಟ್ಟಿದ್ದಾರೆ. ಇದನ್ನು ಕಂಡು ಕುಟುಂಬಸ್ಥರು ಆಶ್ಚರ್ಯಗೊಂಡಿದ್ದಾರೆ. ಕೂಡಲೇ ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.