newsics.com
ಭಾನುವಾರ ರಾತ್ರಿ ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜಾ ವೇಳಾಪಟ್ಟಿ ಬದಲಾವಣೆ ಮತ್ತು ದೇವಾಲಯ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ.
ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಹಾಗೂ ದೇವಾಲಯ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು:
ಗವಿಗಂಗಾಧರೇಶ್ವರ ದೇವಸ್ಥಾನ
ನಗರದ ಐತಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನವು ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ.
ಬೆಳಗ್ಗೆ 7 ಗಂಟೆಗೆ ಮಹಾಭಿಷೇಕ ಹಾಗೂ ಪೂಜೆ ನೆರವೇರಿಸಲಾಗುತ್ತದೆ.
ಗಂಗಾಧರನಿಗೆ ಕ್ಷೀರ ನೈವೇದ್ಯ ಸಲ್ಲಿಸಲಾಗುವುದು.
ಬೆಳಗ್ಗೆ 11 ಗಂಟೆಯೊಳಗೆ ತೈಲಾಭಿಷೇಕ ಮತ್ತು ದರ್ಬೆಬಂಧನ ನೆರವೇರಿಸಿ ದೇವಾಲಯ ಸಂಪೂರ್ಣ ಬಂದ್ ಮಾಡಲಾಗುವುದು.
ಸೋಮವಾರ ಸೂರ್ಯೋದಯದ ನಂತರ ದೇವಸ್ಥಾನವನ್ನು ಶುದ್ಧಿಗೊಳಿಸಿ ಪುಣ್ಯಾಹ ನೆರವೇರಿಸಿ, ಬೆಳಗ್ಗೆ 8:30ಕ್ಕೆ ಮಹಾಭಿಷೇಕ ನಡೆಸಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅರ್ಚಕರಾದ ಶ್ರೀಕಂಠ ದೀಕ್ಷಿತ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ನಿಮಿಷಾಂಬಾ ದೇವಸ್ಥಾನ
ರಾತ್ರಿ 9:50ಕ್ಕೆ ಚಂದ್ರಗ್ರಹಣ ಗೋಚರಿಸುವುದರಿಂದ, ಮುಂಚಿತವಾಗಿಯೇ ವಿಶೇಷ ಪೂಜೆ ನಡೆಸಲಾಗುತ್ತದೆ.
ದೇವಾಲಯದ ಅರ್ಚಕ ಜಗನ್ನಾಥ ಭಟ್ರು ಅವರ ಮಾಹಿತಿ ಪ್ರಕಾರ, ಗ್ರಹಣಕ್ಕೂ ಮುನ್ನ ಪೂಜೆ ನೆರವೇರಿಸಿ ಸಂಜೆ ದೇವಾಲಯ ಬಾಗಿಲು ಮುಚ್ಚಲಾಗುತ್ತದೆ.
ಸೋಮವಾರ ಬೆಳಿಗ್ಗೆ ದೇವಸ್ಥಾನ ಶುದ್ಧಿಗೊಳಿಸಿ ಪುನಃ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ
ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ದೇವಾಲಯ ಮುಚ್ಚಲಾಗುವುದು.
ಬೆಳಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿತರಣೆ ನಡೆದ ನಂತರ ಭಕ್ತರ ದರ್ಶನ ನಿಲ್ಲಿಸಲಾಗುತ್ತದೆ.
ಸೋಮವಾರ ಸೂರ್ಯೋದಯದ ನಂತರ ದೇವಾಲಯ ಶುದ್ಧಿಗೊಳಿಸಿ ಅಭಿಷೇಕ ಹಾಗೂ ಹಾಗೂ ಮಹಾಮಂಗಳಾರತಿ ನಡೆಸಲಾಗುವುದು.
ಉಡುಪಿ ಶ್ರೀಕೃಷ್ಣ ಮಠ
ಸಾಮಾನ್ಯವಾಗಿ ಮಧ್ಯಾಹ್ನ 12:30 ರಿಂದ 3:30ರೊಳಗೆ ನಡೆಯುವ ಅನ್ನಪ್ರಸಾದ ಸೇವೆಯನ್ನು, ಭಾನುವಾರ ಬೆಳಗ್ಗೆ 10:30ರಿಂದ 12 ಗಂಟೆಯೊಳಗೆ ಮುಗಿಸಲಾಗುತ್ತದೆ.
ಚಂದ್ರಗ್ರಹಣ ಸಂದರ್ಭದಲ್ಲಿ ಗ್ರಹಣ ಶಾಂತಿ ಹೋಮ, ಹವನ, ಜಪ-ತಪ ನಡೆಯಲಿದೆ.
ಗ್ರಹಣಕ್ಕೂ ಮುನ್ನ ದೇವರಿಗೆ ಮಾಡಿದ್ದ ಅಲಂಕಾರಗಳನ್ನು ತೆಗೆದುಹಾಕಲಾಗುವುದು.
ಸ್ಪರ್ಶಕಾಲದಲ್ಲಿ ಭಕ್ತರು ಮಧ್ವ ಸರೋವರದಲ್ಲಿ ಸ್ನಾನ ಮಾಡಿ ಜಪತಪದಲ್ಲಿ ಭಾಗವಹಿಸಲಿದ್ದಾರೆ.
ಮೋಕ್ಷಕಾಲದಲ್ಲಿ ಪುನಃ ಪುಣ್ಯಸ್ನಾನ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಚಂದ್ರಗ್ರಹಣದ ಮುನ್ನವೇ ಬಲಿ ಮತ್ತು ಉತ್ಸವಗಳನ್ನು ನೆರವೇರಿಸಲಾಗುತ್ತದೆ.
ಗ್ರಹಣಕಾಲದಲ್ಲಿ ನಿರಂತರ ಅಭಿಷೇಕ ಹಾಗೂ ಮಂತ್ರಪಠಣ ನಡೆಯುತ್ತಿದ್ದು, ಮೋಕ್ಷಕಾಲದ ನಂತರ ಮಂಗಳಾರತಿ ಸಲ್ಲಿಸಲಾಗುತ್ತದೆ.
ಬಳ್ಳಾರಿ – ವಿಜಯನಗರ
ಕೋಟೆ ಮಲ್ಲೇಶ್ವರ, ಕುಮಾರಸ್ವಾಮಿ, ಹಂಪಿಯ ವಿರೂಪಾಕ್ಷೇಶ್ವರ, ಹೊಸಪೇಟೆಯ ವಡಕರಾಯ ದೇವಸ್ಥಾನ ಸೇರಿದಂತೆ ಪ್ರಮುಖ ಕ್ಷೇತ್ರಗಳು ಮಧ್ಯಾಹ್ನ 2 ಗಂಟೆಯಿಂದ ಬಂದ್ ಆಗಲಿವೆ.
ದುರ್ಗಮ್ಮ ಮತ್ತು ಮೈಲಾರ ದೇವಸ್ಥಾನ ಮಾತ್ರ ಎಂದಿನಂತೆ ತೆರೆದಿರುತ್ತದೆ.
ಗ್ರಹಣ ಮೋಕ್ಷದ ನಂತರ ದೇವಸ್ಥಾನ ಶುದ್ಧಿಗೊಳಿಸಿ ಪೂಜೆ ನೆರವೇರಿಸಲಾಗುವುದು.
ಮಂಡ್ಯ
ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನ ಮಧ್ಯಾಹ್ನ 1 ಗಂಟೆಗೆ ಬಂದ್ ಆಗಿ, ಸೋಮವಾರ ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಿದೆ.
ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಭ ದೇವಸ್ಥಾನ ಮಧ್ಯಾಹ್ನ 12 ಗಂಟೆಯಿಂದಲೇ ಬಂದ್ ಆಗಲಿದೆ.
ಶ್ರೀರಂಗನಾಥ ದೇವಾಲಯ ಸಂಜೆ 5ಕ್ಕೆ ಬಂದ್ ಆಗಿ, ಸೋಮವಾರ ಬೆಳಗ್ಗೆ 7ರಿಂದ ದರ್ಶನಕ್ಕೆ ಅವಕಾಶ ನೀಡಲಿದೆ.
ಕೊಪ್ಪಳ
ಹುಲಿಗೇಮ್ಮ ದೇವಸ್ಥಾನ ಸಂಜೆ 5 ಗಂಟೆಗೆ ಬಂದ್ ಆಗಲಿದೆ. ರಾತ್ರಿ 2 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ.
ಗವಿಸಿದ್ದೇಶ್ವರ ಮಠ ಎಂದಿನಂತೆ ಬಂದ್ ಆಗಲಿದ್ದು, ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನವೂ ಸಂಜೆ 5 ಗಂಟೆಯ ನಂತರ ಬಂದ್ ಆಗಲಿದೆ.
ಗದಗ
ತ್ರಿಕೂಟೇಶ್ವರ ದೇವಸ್ಥಾನ ರಾತ್ರಿ 10 ಗಂಟೆಗೆ ಬಂದ್ ಆಗಿ, ಮೋಕ್ಷಕಾಲದ ನಂತರ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಮರುದಿನ ಬೆಳಗ್ಗೆ ಎಂದಿನಂತೆ ದರ್ಶನಕ್ಕೆ ಅವಕಾಶ.
ಶಿವಮೊಗ್ಗ
ಸಿಗಂದೂರು ಚೌಡೇಶ್ವರಿ ದೇವಸ್ಥಾನ ಎಂದಿನಂತೆ ತೆರೆದಿರುತ್ತದೆ.
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆ ಇರುವುದಿಲ್ಲ.
ಚಾಮರಾಜನಗರ
ಮಲೆ ಮಹದೇಶ್ವರ ದೇವಸ್ಥಾನ ಎಂದಿನಂತೆ ತೆರೆದಿರುತ್ತದೆ.
ಗ್ರಹಣದ ವೇಳೆ ಯಾವುದೇ ವಿಶೇಷ ಪೂಜೆ ಇಲ್ಲ.
ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ನಿರ್ಬಂಧವಿಲ್ಲ.
ಮೈಸೂರು
ಚಾಮುಂಡೇಶ್ವರಿ ದೇವಸ್ಥಾನ ರಾತ್ರಿ 9ಕ್ಕೆ ಬಂದ್ ಆಗಿ, ಸ್ಪರ್ಶಕಾಲ ಹಾಗೂ ಮೋಕ್ಷಕಾಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಸೋಮವಾರ ಬೆಳಗ್ಗೆ 8ರಿಂದ ದರ್ಶನಕ್ಕೆ ಅವಕಾಶ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ರಾತ್ರಿ 8ಕ್ಕೆ ಬಂದ್ ಆಗಲಿದೆ. ಗ್ರಹಣ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಒಂಟಿಕೊಪ್ಪಲು ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮಧ್ಯಾಹ್ನ 12ಕ್ಕೆ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ ಪುನಃ ತೆರೆದುಕೊಳ್ಳಲಿದೆ.
ಬಾಗಲಕೋಟೆ
ಬಾದಾಮಿ ಬನಶಂಕರಿ ದೇವಸ್ಥಾನ ಬಂದ್ ಆಗದೇ, ಗ್ರಹಣ ಕಾಲದಲ್ಲಿ ನಿರಂತರ ಜಲಾಭಿಷೇಕ ನಡೆಯಲಿದೆ.
ಸ್ಪರ್ಶಕಾಲದಿಂದ (9:57) ಮೋಕ್ಷಕಾಲದವರೆಗೆ (1:27) ಅಭಿಷೇಕ ಮುಂದುವರಿಯಲಿದೆ.
ಉತ್ತರ ಕನ್ನಡ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಬೆಳಗ್ಗೆ 10:45ರವರೆಗೆ ದರ್ಶನಕ್ಕೆ ಅವಕಾಶ ನೀಡಲಿದ್ದು, ಬಳಿಕ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ 9:45ರಿಂದ ಮಧ್ಯರಾತ್ರಿ 1:26ರವರೆಗೆ ಮಾತ್ರ ದರ್ಶನ ಅವಕಾಶ.
ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ರಾತ್ರಿ 10ರಿಂದಲೂ ದರ್ಶನ ಸಿಗಲಿದೆ.
ಮುರುಡೇಶ್ವರದಲ್ಲಿ ಮಧ್ಯಾಹ್ನ 11:30ರಿಂದ 12:30ರವರೆಗೆ ಊಟ, ಸಂಜೆ 6:30ಕ್ಕೆ ವಿಶೇಷ ಪೂಜೆ ನಡೆಯಲಿದೆ.
ಚಿಕ್ಕಮಗಳೂರು
ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ರಾತ್ರಿ ಪ್ರಸಾದ ಸೇವೆ ಇರುವುದಿಲ್ಲ.
ರಾತ್ರಿ 8:30ಕ್ಕೆ ದೇವಸ್ಥಾನ ಬಂದ್ ಆಗಿ, ಸೋಮವಾರ ಬೆಳಗ್ಗೆ 6ಕ್ಕೆ ಪುನಃ ದರ್ಶನಕ್ಕೆ ಅವಕಾಶ.
ಕೊಡಗು
ಮಡಿಕೇರಿ ಓಂಕಾರೇಶ್ವರ, ಭಾಗಮಂಡಲ ಭಗಂಡೇಶ್ವರ ಹಾಗೂ ತಲಕಾವೇರಿ ದೇವಸ್ಥಾನಗಳಲ್ಲಿ ಸಂಜೆ 5 ಗಂಟೆಯ ನಂತರ ದರ್ಶನ ಅವಕಾಶವಿಲ್ಲ.
ಸೋಮವಾರ ಬೆಳಗ್ಗೆ ಪುನಃ ದೇವಸ್ಥಾನ ತೆರೆದಿಡಲಾಗುವುದು.
ಚಿಕ್ಕಬಳ್ಳಾಪುರ – ಬೆಂಗಳೂರು ಗ್ರಾಮಾಂತರ
ಐತಿಹಾಸಿಕ ಭೋಗನಂದೀಶ್ವರ ದೇವಸ್ಥಾನ ಹಾಗೂ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಭಾನುವಾರ ಸಂಜೆ 4 ಗಂಟೆಯ ನಂತರ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.