newsics.com
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ದೂರುದಾರನ ಆರೋಪ ಸಂಬಂಧ ಎಸ್ಐಟಿ ನಡೆಸುತ್ತಿದ್ದು,ದಿನಕ್ಕೊಂದು ತಿರುವು ಪಡೆಯುತ್ತಿದೆ.ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದೆ ಎಂದು ಎಸ್ಐಟಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈಗ ಈ ಚಿನ್ನಯ್ಯ ತಂದಿದ್ದ ಮೊದಲ ತಲೆ ಬುರುಡೆಯ ಮೂಲ ಯಾವುದು ಎಂಬುದು ಎಸ್ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಿಕೆ ನೀಡಲು ಮೂರೂವರೆಯಿಂದ ನಾಲ್ಕು ಲಕ್ಷ ರೂಪಾಯಿ ಹಣ ನೀಡಿದ್ದರು. ಬಳಿಕ ಬೆದರಿಕೆಯನ್ನು ಹಾಕಿದ್ದರು ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಸುಳ್ಳು ಹೇಳಿಕೆ ನೀಡುವಂತೆ ಹಣ ನೀಡಿದವರು, ಬೆದರಿಕೆ ಹಾಕಿದವರ ವಿರುದ್ಧ ಈಗ ಎಸ್ಐಟಿ ತನಿಖೆ ನಡೆಸುತ್ತಿದೆ.
ಅವರು ಹೇಳಿಕೊಟ್ಟಂತೆ ಹೇಳಿಕೆ ನೀಡಲು ನನ್ನ ಸಂಪರ್ಕ ಮಾಡಿದ್ರು. ಐದು, ಹತ್ತು, ₹15 ಸಾವಿರದಂತೆ ಹಂತ ಹಂತವಾಗಿ ಹಣ ನೀಡಿದ್ದಾರೆ. ಸುಮಾರು ಮೂರುವರೆಯಿಂದ ನಾಲ್ಕು ಲಕ್ಷದವರೆಗೆ ಹಣ ಕೊಟ್ಟಿದ್ದಾರೆ. ಕೊನೆಯ ಹಂತದಲ್ಲಿ ನಾನು ಅವರಿಂದ ದೂರವಾಗಲು ತೀರ್ಮಾನಿಸಿದ್ದೆ. ಹೇಳಿದ ಹಾಗೆ ಕೇಳಿಲ್ಲ ಅಂದ್ರೆ ನಿನ್ನ ವಿರುದ್ಧ ಕೇಸ್ ಹಾಕಿಸ್ತೀವಿ ಅಂದ್ರು . ಜೀವಾವಧಿ ಶಿಕ್ಷೆ ಆಗುವ ಹಾಗೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ರು. ಇಲ್ಲವಾದ್ರೆ ಜನರೇ ನಿನ್ನ ಬಿಡಲ್ಲ, ಹೊಡೆದು ಮುಗಿಸ್ತಾರೆ ಅಂತ ಹೆದರಿಸಿದ್ರು ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ.