newsics.com
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಇಂದು ನಡೆಸಿರುವ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.
ಕನಿಷ್ಠ ಹತ್ತು ದಿನಗಳ ಬಳಿಕವೇ ದರ್ಶನ್ ಜಾಮೀನು ಕುರಿತಾಗಿ ತೀರ್ಪು ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿ ತೀರ್ಪಿನ ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೇ 3 ಪುಟಗಳಲ್ಲಿ ಲಿಖಿತ ವಾದಾಂಶವನ್ನು ಒಂದು ವಾರದೊಳಗೆ ಸಲ್ಲಿಸಲು ಘನ ನ್ಯಾಯಾಲಯವು ಇಂದಿನ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದರಿಂದ ಸದ್ಯಕ್ಕೆ 10 ದಿನಗಳವರೆಗೆ ಕೊಲೆ ಆರೋಪ ಹೊತ್ತಿರುವ ದರ್ಶನ್ & ಗ್ಯಾಂಗ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.
‘ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ’
ಪ್ರಕರಣದ ಕುರಿತು ವಿವರಣೆ ನೀಡಿದ ಸರ್ಕಾರದ ಪರ ವಕೀಲ ಲೂಥ್ರಾ ಅವರು, ಈ ಕೇಸ್ ನಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ದರ್ಶನ್ ಹಾಗೂ ಪವಿತ್ರ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ವೇಳೆ ಚಿತ್ರದುರ್ಗದ ರೇಣುಕಾ ಸ್ವಾಮಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಅಲ್ಲದೇ ರೇಣುಕಾಸ್ವಾಮಿ ನಟ ದರ್ಶನ ಅಭಿಮಾನಿಯಾಗಿದ್ದ. ಅಶ್ಲೀಲ ಸಂದೇಶದ ಬಗ್ಗೆ ದರ್ಶನ್ ಗೆ ವಿಷಯ ತಿಳಿದ ನಂತರ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲಾಯಿತು, ಮಾರ್ಗ ಮಧ್ಯೆ ಕಿಡ್ನಾಪರ್ ಗಳು ಡ್ರಿಂಕ್ಸ್ ಮಾಡಿದ್ದರು. ಇದಲ್ಲದೇ ಆತನನ್ನು ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆ ತಂದು ಹಲ್ಲೆ ಮಾಡಿದ್ದಾರೆ. ಅದಲ್ಲದೇ ನಟ ದರ್ಶನ್ ಗೆ ಕ್ರಿಮಿನಲ್ ಹಿನ್ನೆಲೆ ಇದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ನಂತರ ಜೈಲಲ್ಲಿ ಸಹಕರಿಗಳೊಂದಿಗೆ ಸಿಗರೇಟ್ ಸೇದುತ್ತಾ ಐಷಾರಾಮಿ ಜೀವನ ಮಾಡುವಷ್ಟು ಪ್ರಭಾವ ಹೊಂದಿದ್ದರು ಎಂದು ವಿವರಿಸಿದರು. ಕೆಲೆ ಹಿಂದಿನ ಉದ್ದೇಶ ಏನು? ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಕೇಸ್ ದಾಖಲಾಗಿದೆಯೇ ಎಂಬಿತ್ಯಾದಿ ಪ್ರಕರಣದ ವಿವರಣೆಯನ್ನು ಜಡ್ಜ್ ಕೇಳಿದಕ್ಕೆ ವಿವರಣೆ ನೀಡಲಾಯಿತು.