newsics.com
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.
ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ. ಜಾಮೀನು ನೀಡುವಲ್ಲಿ ಹೈಕೋರ್ಟ್ ನ್ಯಾಯಾಧೀಶರು ಇಂತಹ ಮಿಸ್ಟೇಕ್ ಮಾಡಬಹುದಾ’ ಎಂದು ಸುಪ್ರೀಂಕೋರ್ಟ್ ನೇರವಾಗಿ ಪ್ರಶ್ನೆ ಮಾಡಿದೆ.
ಹೈಕೋರ್ಟ್ನ ವಿವೇಚನೆಯ ಬಳಕೆ ಮತ್ತು ಪುರಾವೆಗಳನ್ನು ಪರಿಗಣಿಸುವಲ್ಲಿನ ವೈಫಲ್ಯವನ್ನು ಸುಪ್ರೀಂ ಎತ್ತಿ ಹಿಡಿದಿದೆ.
ಸರ್ಕಾರದ ವಾದ ಆಲಿಸಿದ ನಂತರ, ಸುಪ್ರೀಂ ತನ್ನ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕ ತೀರ್ಪನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಮೊದಲಾದವರಿಗೆ ಜಾಮೀನು ನೀಡಿದ್ದನ್ನು ರಾಜ್ಯ ಸರ್ಕಾರ ಪ್ರಶ್ನೆ ಮಾಡಿತ್ತು. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದೆ. ಈ ವೇಳೆ ನ್ಯಾಯಪೀಠ, ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ಹೊರಹಾಕಿದೆ.
‘ಕರ್ನಾಟಕ ಹೈಕೋರ್ಟ್ ಜಾಮೀನು ನೀಡಲು ಹೀಗೂ ಆದೇಶ ಕೊಡಬಹುದೇ? ಎಲ್ಲಾ ಜಾಮೀನು ಪ್ರಕರಣದಲ್ಲಿ ಹೈಕೋರ್ಟ್ ಒಂದೇ ರೀತಿಯ ಆದೇಶ ನೀಡಿದೆ. ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿದೆಯೇ ಎಂಬುದು ಮುಖ್ಯ. ಘಟನೆ ನಡೆದಿರುವುದು ಸುಳ್ಳೇ? ಟೆಸ್ಟ್ ರಿಪೋರ್ಟ್ ಪರಿಗಣಿಸಬಾರದೇ ಹೇಳಿ’ ಎಂದು ಕೋರ್ಟ್ ದರ್ಶನ್ ಪರ ವಕೀಲರಿಗೆ ಕೇಳಿದೆ.
ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆಯಲ್ಲವೇ? ಹೈಕೋರ್ಟ್ ಆದೇಶ ನೀಡಿರುವ ರೀತಿ ನಮಗೆ ನೋವುಂಟುಮಾಡಿದೆ. ಟ್ರಯಲ್ ಕೋರ್ಟ್ ಜಡ್ಜ್ ತಪ್ಪು ಮಾಡುತ್ತಾರೆಂದರೆ ನಂಬಬಹುದು. ಆದರೆ, ಹೈಕೋರ್ಟ್ ಜಡ್ಜ್ ನೀಡಿರುವ ಕಾರಣಗಳನ್ನು ಒಪ್ಪುವುದು ಹೇಗೆ’ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಕೆಯಾಗಿದೆ.
ಗುರುವಾರ (ಜುಲೈ 24) ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಪರ್ದಿವಾಲಾ ಎರಡೂ ಕಡೆಯ ವಾದಗಳನ್ನು ಆಲಿಸಿದರು.
ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಕೊಲೆ ನಡೆದ ಸ್ಥಳಕ್ಕೆ ರೇಣುಕಾಸ್ವಾಮಿಯನ್ನು ಪ್ಲ್ಯಾನ್ ಹಾಕಿ ಕರೆಸಿದ್ದು ದರ್ಶನ್. ಅಲ್ಲದೇ ಸ್ಥಳಕ್ಕೆ ದರ್ಶನ್ ಭೇಟಿ ನೀಡಿದ್ದು, ಬಟ್ಟೆಯಲ್ಲಿದ್ದ ರಕ್ತದ ಕಲೆ, ಪಾದರಕ್ಷೆಯಲ್ಲಿದ್ದ ಮಣ್ಣೇ ಇದಕ್ಕೆ ಸಾಕ್ಷಿ ಎಂದರು. ಅಲ್ಲದೇ ದರ್ಶನ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದು ಜೈಲಲ್ಲೂ ಅಪರಾಧಿಗಳ ಜತೆ ಸಿಗರೇಟ್ ಸೇದುತ್ತಾ ಕುಳಿತಿದ್ದ ಎಂದು ವಾದಿಸಿ ಜಾಮೀನು ರದ್ದು ಮಾಡಬೇಕೆಂದು ಕೋರಿದರು.
ದರ್ಶನ್ ಪರ ವಕೀಲ ಸಿದ್ಧಾರ್ಥ್ ದವೆ ದರ್ಶನ್ ಘಟನೆಗೆ ಬಂದಿದ್ದಾರೆ ಎನ್ನುವುದಕ್ಕೆ ಪುರಾವೆಯೇ ಇಲ್ಲ ಹಾಗೂ ರಕ್ತದ ಕಲೆ ಇರಲಿಲ್ಲ. ಘಟನೆ ನಡೆದ ಮೂರು ದಿನಗಳ ಬಳಿಕ ಬಟ್ಟೆ ಪಡೆದು ಫೊರೆನ್ಸಿಕ್ನಲ್ಲಿ ರಕ್ತದ ಕಲೆ ಇದೆ ಎನ್ನುತ್ತಿದ್ದಾರೆ. ಸಾಕ್ಷಿಗಳು 12 ದಿನಗಳ ಬಳಿಕ ಮಾಹಿತಿ ನೀಡಿರುವುದು ಅನುಮಾನ ಮೂಡಿಸುತ್ತಿದೆ ಎಂದು ವಾದಿಸಿದರು.
ಹೀಗೆ ಇಬ್ಬರ ವಾದವನ್ನೂ ಆಲಿಸಿದ ನ್ಯಾಯಮೂರ್ತಿ ಪರ್ದಿವಾಲಾ ಹೈಕೋರ್ಟ್ ಮಾಡಿರುವ ತಪ್ಪನ್ನು ನಾವು ಮಾಡುವುದಿಲ್ಲ. ಹೈಕೋರ್ಟ್ ಆತುರದಿಂದ ಆದೇಶ ಹೊರಡಿಸಿರುವುದು ಕಂಡಬರುತ್ತಿದೆ. ನಾವು ಕಾಲಾವಕಾಶ ತೆಗೆದುಕೊಳ್ಳುತ್ತೇವೆ ಎಂದಿದೆ. 10 ದಿಗನಳ ಬಳಿಕ ನೇರವಾಗಿ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ.
Rain In Karnataka ಮುಂದಿನ ಐದು ದಿನ ರಾಜ್ಯಾದ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ