newsics.com
ಮಹಾರಾಷ್ಟ್ರ:ಅಪಘಾತವಾಗಿದ್ದ ಕಾರನ್ನು ತೆರವು ಮಾಡುತ್ತಿದ್ದವರ ಮೇಲೆ ಲಾರಿ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಕಾರು ಡಿವೈಡರ್ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು. ಆದರೂ ಎಲ್ಲರೂ ಬದುಕುಳಿದಿದ್ದರು. ಕಾರಿನಿಂದ ಹೊರ ಬಂದ ಬಳಿಕ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರ ಹೆಸರುಗಳು ಬಾಲು ಅಟ್ಕರೆ, ಮನೋಜ್ ಕರಂಡೆ, ಕೃಷ್ಣ ಜಾಧವ್, ದೀಪಕ್ ಸರೋಯಾ, ಭಾಗವತ್ ಪರಾಲ್ಕರ್ ಮತ್ತು ಸಚಿನ್ ನಾನ್ವಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾತ್ರಿ 8:30ರ ಸುಮಾರಿಗೆ ದೀಪಕ್ ಅಟ್ಕರೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು, ಬೀಡ್ ಗ್ರಾಮದಿಂದ 100 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-52ರ ಡಿವೈಡರ್ ಬಳಿ ಅಪಘಾತಕ್ಕೀಡಾಯಿತು. ಅವಘಡವನ್ನು ನೋಡಿದ ಕೆಲವರು ಕಾರನ್ನು ರಸ್ತೆಯಿಂದ ತೆಗೆಯುತ್ತಿದ್ದರು. 11:30ರ ಸುಮಾರಿಗೆ ವೇಗವಾಗಿ ಬಂದ ಟ್ರಕ್, ತೆರವುಗೊಳಿಸುತ್ತಿದ್ದವರ ಮೇಲೆ ಹಾದು ಹೋಗಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.