newsics.com
ನವದೆಹಲಿ : ಎಎಪಿ ನಾಯಕರು ಮತ್ತು ಮಾಜಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಮತ್ತೊಂದು ಪ್ರಕರಣ ದಾಖಲಿಸಿದೆ.
ದೆಹಲಿ ಸರ್ಕಾರದ ಅಧಿಕಾರಾವಧಿಯಲ್ಲಿ 12,000 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.
ದೆಹಲಿಯಲ್ಲಿ ಆಮ್ ಆದ್ಮ ಪಕ್ಷ (ಎಎಪಿ) ಆಳ್ವಿಕೆಯ ಅವಧಿಯಲ್ಲಿ ತರಗತಿ ಕೊಠಡಿಗಳು/ಕಟ್ಟಡಗಳ ನಿರ್ಮಾಣದಲ್ಲಿ 2,000 ಕೋಟಿ ರೂ.ಗಳ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಶಾಲೆಗಳಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಲು ಹೆಚ್ಚಿನ ವೆಚ್ಚ ತಗುಲಿದ ಆರೋಪದ ಮೇಲೆ ಇಬ್ಬರ ವಿರುದ್ಧವೂ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಈ ಯೋಜನೆಯನ್ನು ಆಮ್ ಆದ್ಮ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕೆಲವು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ವರದಿಯಾಗಿದೆ. ಇದಲ್ಲದೆ, ನಿಗದಿತ ಅವಧಿಯಲ್ಲಿ ಒಂದೇ ಒಂದು ಕೆಲಸವೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಅಲ್ಲದೆ ಈ ತರಗತಿ ಕೊಠಡಿಗಳು ಕೇವಲ 30 ವರ್ಷಗಳ ಕಾಲ ಬಾಳಿಕೆಬರುವಂತಿದ್ದು ಇದರ ನಿರ್ಮಾಣದ ವೆಚ್ಚ ಮಾತ್ರ 75 ವರ್ಷಗಳ ಕಾಲ ಬಾಳಿಕೆ ಬರುವಂತೆ ತೋರಿಸಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ತನಿಖೆಯಿಂದ ತಿಳಿದುಬಂದಿದೆ.
34 ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ, ಅವರಲ್ಲಿ ಹೆಚ್ಚಿನವರು ಎಎಪಿಗೆ ಸಂಬಂಧಿಸಿದವರು ಎಂದು ದೂರಿನಲ್ಲಿ ತಿಳಿಸಲಾಗಿದೆ.