newsics.com
ತುಳುನಾಡಿನಲ್ಲಿ ‘ಬಿಸು’ವಾಗಿಯೂ ಕೇರಳದಲ್ಲಿ ‘ವಿಷು’ವಾಗಿಯೂ ಅಚರಿಸಲ್ಪಡುವ ಸೌರಯುಗಾದಿ ಹಬ್ಬವೂ ಸುಗ್ಗಿ ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಸೌರಮಾನ ಪಂಚಾಂಗದ ಪ್ರಕಾರ ಸೌರಯುಗಾದಿಯನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿಯ ಹಬ್ಬವನ್ನು ಎ. 14 ರಂದು ಆಚರಿಸಲಾಗುತ್ತದೆ. ಜೊತೆಗೆ ಈ ದಿನ ಮೀನ ಮಾಸವು ಮುಗಿದು ಮೇಷ ಮಾಸ ಆರಂಭವಾಗುತ್ತದೆ. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ತುಳು ಸಂಸ್ಕೃತಿ ಕೃಷಿಯ ಜೊತೆಗೆ ಮಿಳಿತಗೊಂಡಿದೆ. ಆದ್ದರಿಂದ, ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ ‘ಕೈ ಬಿತ್ ಹಾಕುವುದು’ ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆಯನ್ನು ಕಾಣಬಹುದು
ಈ ದಿನ ತಮ್ಮ ಮನೆಗಳಲ್ಲಿ ಹೊಸ ವರ್ಷದ ಆಚರಣೆ ಮಾಡುತ್ತಾರೆ. ಪೂಜಾ ಪದ್ದತಿಗಳನ್ನು ಅನುಸರಿಸುವ ಮೂಲಕ ಪುಣ್ಯ ಕ್ಷೇತ್ರಗಳ ಭೇಟಿ ನೀಡಿ, ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದರ ಜೊತೆಗೆ ದೇವಸ್ಥಾನಗಳಲ್ಲಿ ದಾನ -ಧರ್ಮಗಳನ್ನು ಮಾಡುವುದು, ತರ್ಪಣ ಬಿಡುವುದಕ್ಕೆ ಇದು ಪ್ರಶಸ್ತಕಾಲವಾಗಿರುತ್ತದೆ.
ಬಿಸು ಹಬ್ಬದಂದು ಬೆಳಗ್ಗೆ ಬೇಗನೇ ಎದ್ದು ಇಲ್ಲವೇ ಅದರ ಮುನ್ನಾ ದಿನವೇ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ದೈವಸ್ಥಾನ, ದೇವರು ಅಥವಾ ತುಳಸಿಕಟ್ಟೆಯ ಎದುರು ಎರಡು ಜೋಡಿ ಬಾಳೆ ಎಲೆಯಲ್ಲಿ ಒಂದು ಮಣೆ ಇಡುತ್ತಾರೆ. ಅದರ ಮೇಲೆ ದೀಪವಿಟ್ಟು ಅದರ ಎಡ ಬಲಗಳಲ್ಲಿ ಹೂವು, ಅಕ್ಕಿ, ಹಣ್ಣು, ತರಕಾರಿ, ತೆಂಗಿನಕಾಯಿ ಇಟ್ಟು ಅದರ ಮಧ್ಯಭಾಗದಲ್ಲಿ ಕನ್ನಡಿ ಇಡುತ್ತಾರೆ.
ಈ ದಿನ ಮುಂಜಾನೆ ಎದ್ದು ಮನೆಗಳಲ್ಲಿ ಸಿದ್ಧಪಡಿಸಿದ ಕಣಿ ಕಂಡು ಆ ಬಳಿಕ ಹತ್ತಿರದ ದೇವಸ್ಥಾನ, ದೈವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ದೇವಸ್ಥಾನಗಳಲ್ಲೂ ಕಣಿ ಸಿದ್ಧಪಡಿಸಲಾಗುತ್ತದೆ. ಹಾಗಾಗಿಯೇ ಸೌರಯುಗಾದಿಯು ತುಳುನಾಡಿನಲ್ಲಿ “ಕಣಿ ಕಾಣುವ ಹಬ್ಬ” ಎಂದೇ ಪ್ರಸಿದ್ದಿಯಾಗಿದೆ. ವರುಷದ ಆರಂಭದಲ್ಲಿ ಮೊದಲಿಗೆ ಆರಾಧ್ಯ ದೇವರು ಅಥವಾ ಮನೆ ದೇವರನ್ನು ಕಾಣುವ ಅಥವಾ ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ.