newsics.com
ಬೆಂಗಳೂರು: ಶಾಸಕರ ವೇತನವನ್ನು 50%ನಷ್ಟು ಹೆಚ್ಚಿಸಲು ಕಲಾಪ ಸಲಹಾ ಸಮಿತಿ ನಿರ್ಧರಿಸಿದೆ.
ಈಗಾಗಲೇ ರಾಜ್ಯದ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ಈ ಮಧ್ಯೆ ಶಾಸಕರು ಇದೀಗ ಜನರ ದುಡ್ಡಿನಿಂದ ಮತ್ತೆ ತಮ್ಮ ವೇತನ ಹೆಚ್ಚಳ ಮಾಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಸದನ ಕಾರ್ಯಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ವೇತನ ಪರಿಷ್ಕರಣೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಸುಮಾರು ಶೇ 50ರಷ್ಟು ವೇತನ ಹೆಚ್ಚಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದಾರೆ.
ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಜನಪ್ರತಿನಿಧಿಗಳ ವೇತನ 50% ಹೆಚ್ಚಾಗಲಿದೆ. ಇದರ ಜೊತೆ ಇತರೆ ಭತ್ಯೆಗಳ ಮೊತ್ತವೂ ಹೆಚ್ಚಲಿದೆ.
ಕಳೆದ ಅಧಿವೇಶನದಲ್ಲಿ ಶಾಸಕರ ವೇತನ ಹೆಚ್ಚಳ ಮಾಡುವಂತೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಪ್ರಸ್ತಾಪ ಮಾಡಿದ್ದರು. ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಶಾಸಕರ ವೇತನ 80 ಸಾವಿರ ರೂ.ಗೆ ಏರಿಕೆಯಾಗಲಿದೆ.
ಶಾಸಕರ ತಿಂಗಳ ವೇತನ/ಭತ್ಯೆ ಎಷ್ಟಿದೆ?
* ವೇತನ – 40,000 ರೂ.
* ಕ್ಷೇತ್ರ ಭತ್ಯೆ – 60,000 ರೂ.
* ಪ್ರಯಾಣ ಭತ್ಯೆ – 60,000 ರೂ
* ಆಪ್ತ ಸಹಾಯಕರ ವೇತನ – 20,000 ರೂ.
* ದೂರವಾಣಿ ವೆಚ್ಚ – 20,000 ರೂ.
* ಅಂಚೆ ವೆಚ್ಚ – 5000 ರೂ
* ಒಟ್ಟು ಮೊತ್ತ – 2,05,000 ರೂ.
ಪ್ರಸ್ತುತ ಇರುವ ಸಂಬಳ ಎಷ್ಟು?
ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ – 75,000 ರೂ.
ಮುಖ್ಯಮಂತ್ರಿ – 75,000 ರೂ.
ಉಪ ಸ್ಪೀಕರ್ ಮತ್ತು ಉಪ ಸಭಾಪತಿ – 60,000 ರೂ.
ಕ್ಯಾಬಿನೆಟ್ ಸಚಿವರು – 60,000 ರೂ.
ವಿಪಕ್ಷ ನಾಯಕರು – 60,000 ರೂ.
ರಾಜ್ಯ ಸಚಿವ ದರ್ಜೆ – 50,000 ರೂ.
ಸರ್ಕಾರ-ವಿಪಕ್ಷ ಮುಖ್ಯ ಸಚೇತಕ -50,000 ರೂ.
ಎಂಎಲ್ಸಿ – 40,000 ರೂ.
ಶಾಸಕರ ವಿರಾಮಕ್ಕೆ ಮಸಾಜ್ ಕುರ್ಚಿ: ಈಗಾಗಲೇ ಶಾಸಕರ ವಿರಾಮ, ನಿದ್ರೆಗೆ ವಿಧಾನಸಭೆ ಲಾಂಜ್ಗೆ 15 ಮಸಾಜ್ ಕುರ್ಚಿಯನ್ನು ಬಾಡಿಗೆಗೆ ತರಲಾಗಿದೆ. ಶಾಸಕರು ಮಧ್ಯಾಹ್ನ ಭೋಜನದ ಬಳಿಕ ನಿದ್ದೆ ಮಾಡಲು ಹೊರ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್ಗಳ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಯು. ಟಿ ಖಾದರ್ ತೀರ್ಮಾನಿಸಿದ್ದಾರೆ. ಹೀಗಾಗಿ, ಈ ಬಾರಿ ನಡೆಯುವ ಜಂಟಿ ಹಾಗೂ ಬಜೆಟ್ ಅಧಿವೇಶನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಶಾಸಕರು ಕಿರು ನಿದ್ದೆಗೆ ಜಾರಲು ಸುಮಾರು 15 ರಿಕ್ಲೈನರ್ ಚೇರ್ಗಳನ್ನು ಬಾಡಿಗೆಗೆ ತರಲಾಗಿದೆ.