newsics.com
ತುಮಕೂರು: ಈರುಳ್ಳಿ ಕೊಳ್ಳಿ, ಬಹುಮಾನ ಗೆಲ್ಲಿ… ಹೀಗೊಂದು ಆಫರ್ ಬೋರ್ಡ್ ಅನ್ನು ತುಮಕೂರಿನ ಅಂತರಸನಹಳ್ಳಿಯ ಮಾರುಕಟ್ಟೆಯಲ್ಲಿ ಹಾಕಲಾಗಿದೆ.
ಪಿ.ವಿ.ನೃಪತುಂಗ ಅಂಡ್ ಸನ್ಸ್ನ ಈರುಳ್ಳಿ ಮಂಡಿಯಿಂದ ಈ ವಿಶೇಷ ಆಫರ್ ಘೋಷಣೆ ಮಾಡಿದ್ದಾರೆ. ಈರುಳ್ಳಿ ಮಂಡಿ ಮಾಲೀಕ ನೃಪತುಂಗ ಎನ್ನುವವರು, ತನ್ನ ಅಂಗಡಿಯಲ್ಲಿ ಈರುಳ್ಳಿ ಖರೀದಿ ಮಾಡಿದರೆ ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ, ಯುಗಾದಿ ಹಬ್ಬಕ್ಕೆ ಚಿನ್ನದುಂಗರದ ಉಡುಗೊರೆ ಕೊಡಲು ಸಹ ಮುಂದಾಗಿದ್ದಾರೆ.
100 ರೂಪಾಯಿ ಮೇಲ್ಪಟ್ಟು ಈರುಳ್ಳಿ ಖರೀದಿ ಮಾಡಿದವರಿಗೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಈರುಳ್ಳಿ ಖರೀದಿಸಿದ್ದ ಪ್ರತಿಯೊಬ್ಬರಿಗೂ ಕೂಪನ್ ಕೊಡಲಾಗುತ್ತದೆ. ಅದರಲ್ಲಿ ಗ್ರಾಹಕರ ಮಾಹಿತಿ ಬರೆದು ಲಕ್ಕಿ ಡ್ರಾ ಡಬ್ಬಿಯಲ್ಲಿ ಹಾಕಲಾಗುತ್ತದೆ. ಪ್ರತಿ ದಿನ ರಾತ್ರಿ 7 ಗಂಟೆಗೆ ಗ್ರಾಹಕರ ಸಮ್ಮುಖದಲ್ಲೇ ಆ ಬಾಕ್ಸ್ ಓಪನ್ ಮಾಡಲಾಗುತ್ತದೆ. ಲಕ್ಕಿ ಡಿಪ್ ಮೂಲಕ ಈ ಕೂಪನ್ ಆಯ್ಕೆ ನಡೆಸಲಾಗುತ್ತದೆ. ವಿಜೇತರಿಗೆ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ಕೊಡಲಾಗುತ್ತಿದೆ ಎಂದು ಮಂಡಿ ಮಾಲೀಕ ನೃಪತುಂಗ ತಿಳಿಸಿದ್ದಾರೆ.