newsics.com
ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಬಿಹಾರದಲ್ಲೂ ರಾಜಕಾರಣಿಗಳ ಪ್ರೇಮಕಥೆಗಳು ಭರ್ಜರಿಯಾಗಿಯೇ ಚರ್ಚೆಯಾಗುತ್ತಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಜೀವನ ಅವರ ಪ್ರೇಮಕಥೆಯಷ್ಟೇ ಕುತೂಹಲಕಾರಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲರಂತೆ ತಂದೆ-ತಾಯಿಗಳು ನಿಶ್ಚಯಿಸಿದಂತೆಯೇ ವಿವಾಹ ಮಾಡಿಕೊಂಡಿದ್ದರು. ಕೃಷ್ಣಾನಂದ ಸಿನ್ಹಾ ಅವರ ಮಗಳು ಮಂಜು ಸಿನ್ಹಾ ಅವರನ್ನು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಹೆಂಡತಿ ತಂದೆ ಸಿನ್ಹಾ ಸಿಯೋಡಾ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.
ಕಾಲೇಜಿನಲ್ಲಿ ಓದುತ್ತಿದ್ದ ಮಂಜು ಸಿನ್ಹಾ ಶಿಕ್ಷಕಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದರು. ಕೃಷ್ಣಾನಂದರು ತಮ್ಮ ಮಗಳನ್ನು ಇಂಜಿನಿಯರ್ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟರು. ಅವರಿಬ್ಬರ ಮದುವೆ ಅತ್ಯಂತ ಸರಳವಾಗಿಯೇ ನೆರವೇರಿತು. ಮಂಜು ಸಿನ್ಹಾ ಮತ್ತು ನಿತೀಶ್ ಕುಮಾರ್ ಅವರು 1973ರಲ್ಲಿ ವಿವಾಹವಾದರು. ನಿತೀಶ್ ಕುಮಾರ್ ಅವರು ವಿದ್ಯಾರ್ಥಿ ದಿನಗಳಿಂದಲೂ ಸರಳತೆಯ ಪ್ರತಿಪಾದಕರಾಗಿದ್ದರು ಮತ್ತು ಅದರಂತೆಯೇ ನಡೆದುಕೊಂಡರು. ವರದಕ್ಷಿಣೆ ರಹಿತ ವಿವಾಹದ ಮೂಲಕ ಜನಮನ ಗೆದ್ದಿದ್ದರು.
ನಿತೀಶ್ ಕುಮಾರ್ ಅವರ ಮದುವೆ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಪ್ರೇಮ್ ಕುಮಾರ್ ಮಣಿ ಮಾತನಾಡಿ, ಆ ಕಾಲದಲ್ಲಿ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಹೆಚ್ಚಾಗಿತ್ತು. ನಿತೀಶ್ ಕುಮಾರ್ ಅವರ ತಂದೆ, ಮಂಜು ಸಿಂಗ್ ಅವರ ತಂದೆಯಿಂದ ₹ 22000 ವರದಕ್ಷಿಣೆ ಪಡೆದಿದ್ದರಂತೆ. ಈ ವಿಷಯ ತಿಳಿದ ನಿತೀಶ್ ಕುಮಾರ್ ತೀವ್ರ ಕೋಪಗೊಂಡು ಹಣ ಹಿಂತಿರುಗಿಸುವಂತೆ ತಂದೆಗೆ ಸಂದೇಶ ಕಳುಹಿಸಿದ್ದರು. ಜೆಪಿ ಆಂದೋಲನದಿಂದ ಬಂದ ನಿತೀಶ್ ಕುಮಾರ್ ಅವರ ಮದುವೆಯಲ್ಲಿ ವರದಕ್ಷಿಣೆ ವ್ಯವಹಾರ ನಡೆದಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ.
ನಿತೀಶ್ ಕುಮಾರ್ ಅವರು ತಮ್ಮ ಪತ್ನಿ ಮಂಜು ಸಿನ್ಹಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಅಂತಾರೆ ಹಿರಿಯ ಪತ್ರಕರ್ತ ಅರುಣ್ ಪಾಂಡೆ. 2007ರಲ್ಲಿ ಅವರ ಪತ್ನಿ ಮಂಜು ಸಿನ್ಹಾ ಅವರು ನಿಧನರಾಗಿದ್ದರು. ಪತ್ನಿ ಅಗಲಿಕೆ ನಿತೀಶ್ ಕುಮಾರ್ ಅವರನ್ನು ಕಂಗೆಡಿಸಿತ್ತು. ಅವರು ನಿಧನರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಮಂಜು ಸಿನ್ಹಾ ಮೇಲೆ ನಿತೀಶ್ ಕುಮಾರ್ ಪ್ರೀತಿ ಇಂದಿಗೂ ಹಾಗೆಯೇ ಹಚ್ಚ ಹಸಿರಾಗಿದೆ.
ಅವರ ಸ್ಮರಣಾರ್ಥ ರಾಜಧಾನಿ ಪಾಟ್ನಾದ ರಾಜೇಂದ್ರ ನಗರದಲ್ಲಿ ದೊಡ್ಡ ಗಾತ್ರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿ ಮರಣ ವಾರ್ಷಿಕೋತ್ಸವ ಮತ್ತು ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿತೀಶ್ ಕುಮಾರ್ ತಪ್ಪದೇ ತಮ್ಮ ಪತ್ನಿ ನಮನ ಸಲ್ಲಿಸುತ್ತಾರೆ. ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೆನಪಿನಾಳಕ್ಕೆ ಜಾರುತ್ತಾರೆ. ಕೆಲ ಸಮಯ ಮೌನಾಚರಣೆ ಮಾಡಿ, ಅಲ್ಲಿಂದ ತೆರಳುತ್ತಾರೆ.