newsics.com
ಗದಗ: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮರ್ಯಾದಾ ಹತ್ಯೆ ಸಾಬೀತಾದ ಹಿನ್ನೆಲೆಯಲ್ಲಿ ಶಿವಪ್ಪ ರಾಥೋಡ್, ರವಿಕುಮಾರ್ ರಾಥೋಡ್, ರಮೇಶ ರಾಥೋಡ್ ಮತ್ತು ಸಾರಿಗೆ ಇಲಾಖೆಯ ಚಾಲಕ ಪರಶುರಾಮ ರಾಥೋಡ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಗದಗ ಜಿಲ್ಲೆ ಗಜೇಂದ್ರಗಢ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ ಮಾದರ ಮತ್ತು ಗಂಗಮ್ಮ ರಾಥೋಡ್ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದು, ಇಬ್ಬರ ಜಾತಿ ಬೇರೆಯಾಗಿದ್ದ ಕಾರಣ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಅಂತರ್ಜಾತಿ ವಿವಾಹಕ್ಕೆ ಗಂಗಮ್ಮ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದವರ ವಿರೋಧದ ನಡುವೆಯೂ ಇಬ್ಬರು ಮದುವೆಯಾಗಿದ್ದರು.
ಇದರಿಂದ ಆಕ್ರೋಶಗೊಂಡ ಗಂಗಮ್ಮ ಮನೆಯವರು 2019 ರ ನವೆಂಬರ್ 6ರಂದು ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು, ಕಲ್ಲು, ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಶಿವಪ್ಪ ರಾಥೋಡ್, ರವಿಕುಮಾರ್ ರಾಥೋಡ್, ರಮೇಶ ರಾಥೋಡ್ ಮತ್ತು ಸಾರಿಗೆ ಇಲಾಖೆಯ ಚಾಲಕ ಪರಶುರಾಮ ರಾಥೋಡ್ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬುಧವಾರ ಮರಣದಂಡನೆ ಶಿಕ್ಷೆ ನೀಡಿ ಆದೇಶಿಸಿದೆ